ಮುಖ್ಯಮಂತ್ರಿಗಳು ‘ದೇವೇಗೌಡ ಮತ್ತು ಅವರ ಮಕ್ಕಳು ಮಾಡಿರುವ ಹಗರಣಗಳ ದಾಖಲೆಗಳು ನಮ್ಮ ಬಳಿ’ ಇವೆ ಎಂದು ಹೇಳುತ್ತಿರುವುದು ಹಾವಾಡಿಗನು ಹಾವು ಬುಟ್ಟಿಯಲ್ಲಿದೆ ಎಂದು ಆಟ ಮುಗಿಸುವ ಕಥೆಯಂತಿದೆ. ಅವರು ಬಾಯ್ಬಿಟ್ಟರೆ ಸಾಕು ‘ಆರು ಕೋಟಿ ಜನ ಕನ್ನಡಿಗರ ಮುಂದೆ ನಿಮ್ಮ ಹಗರಣಗಳನ್ನು ಬಯಲು ಮಾಡುತ್ತೇನೆ’ ಎಂದು ಹೇಳಿಕೊಂಡು ಮುಖ್ಯಮಂತ್ರಿ ಅಧಿಕಾರದ ಅವಧಿಯನ್ನು ಸಂಕೋಚವಿಲ್ಲದೆ ಮುಗಿಸಿಕೊಂಡು ಹೋಗುವ ನಾಟಕ ಜನತೆಗೆ ಅರ್ಥವಾಗುತ್ತಿದೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಅವರ ಮನೆಯ ಹುತ್ತದಲ್ಲಿದ್ದ ಎಲ್ಲಾ ಹಾವುಗಳನ್ನು ಒಂದೊಂದಾಗಿ ತೆಗೆದು ತೋರಿಸಿದ್ದಾರೆ. ಆದರೂ ಅವರು ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎನ್ನುವ ಅವರ ಮಾತುಗಳು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ರಾರಾಜಿಸುತ್ತವೆ. ಅವರಿಗೂ ಆರ್ಎಸ್ಎಸ್ ಗುಣ ಹೋಗಿ ಕಾಂಗ್ರೆಸ್ ಪಕ್ಷದ ಗುಣ ಅಂಟಿಕೊಂಡಿದೆ. ಸಂಘಟನೆಯಿಂದ ಗುರುತಿಸಿಕೊಂಡ ಅವರು ಭ್ರಷ್ಟಾಚಾರ ಆರೋಪ ಬಂದ ಇತರ ಮಂತ್ರಿಗಳ ಸ್ಥಾನ ನಷ್ಟ ಮಾಡಿಸಿದ ಉದಾಹರಣೆಗಳಿವೆ.
ಆದರೆ, ತಮ್ಮ ಕುರ್ಚಿ ತ್ಯಾಗ ಮಾಡುವ ವಿಷಯ ಬಂದಾಗ ಜಾತಿ ರಾಜಕಾರಣ ಮಾಡಿ ಮಠದ ಸ್ವಾಮಿಗಳನ್ನು ಬೀದಿಗೆ ತಂದು ಕೂರಿಸಿದ ಕೀರ್ತಿ ಅವರಿಗೆ ಪ್ರಥಮವಾಗಿ ಸಲ್ಲಬೇಕು. ಬಿಜೆಪಿ ಲಿಂಗಾಯತ ಸಮುದಾಯದ ಇಲ್ಲವೇ ಸ್ವಾಮೀಜಿಗಳ ಜಾಗೀರು ಸ್ವತ್ತಲ್ಲ. ಅಲ್ಲಿ ಎಲ್ಲ ಸಮುದಾಯದವರ ಮತಗಳು ಹಾಗೂ ನಾಯಕರ ಶ್ರಮವಿದೆ. ಮುಖ್ಯಮಂತ್ರಿ ಅವರು ಇನ್ನಾದರೂ ಅವರ ಬುಟ್ಟಿಯಲ್ಲಿ ಇರುವ ಹಾವುಗಳನ್ನು ಜನರಿಗೆ ತೋರಿಸಲಿ. ಒಬ್ಬ ಬಿಜೆಪಿ ಪ್ರೇಮಿಯಾಗಿ ಈ ಮಾತು ಹೇಳುತ್ತಿದ್ದೇನೆ.