ಪರಶುರಾಂಪುರ: ಆಧುನಿಕತೆಯ ಪ್ರಭಾವದಿಂದ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಕಣ್ಮರೆಯಾಗುತ್ತಿವೆ, ಇವುಗಳನ್ನು ಉಳಿಸುವ ಪ್ರಯತ್ನ ಪ್ರಜ್ಞಾವಂತರು ಮಾಡಬೇಕು ಎಂದು ಸಮಾಜಸೇವಕ ಎಲ್. ನಾಗರಾಜ್ ತಿಳಿಸಿದರು.
ಇಲ್ಲಿನ ಸಮುದಾಯ ಭವನದಲ್ಲಿ ಭಾನುವಾರ ವೇದಾವತಿ ಗಡಿನಾಡು ಸಾಂಸ್ಕೃತಿಕ ಸಾಹಿತ್ಯಿಕ ವೇದಿಕೆ, ಸೃಜನ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ `ಬುಡಕಟ್ಟು ಜನಾಂಗದ ಜಾಗೃತಿ ವಿಚಾರ ಸಂಕಿರಣ ಮತ್ತು ಕಲಾಮೇಳ~ ಉದ್ಘಾಟಿಸಿ ಅವರು ಮಾತನಾಡಿದರು.
ಬುಡಕಟ್ಟು ಸಮುದಾಯದ ಜನರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ವೇದಾವತಿ ಗಡಿನಾಡು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ತಿಮ್ಮಣ್ಣ ಪ್ರಾಸ್ತಾವಿಕ ಮಾತನಾಡಿದರು.
ಸ್ನಾತಕೋತ್ತರ ಅಧ್ಯಯನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಮಹೇಶ್ ಮಾತನಾಡಿ, ನಿರ್ಲಕ್ಷ್ಯಕ್ಕೊಳಗಾದ ಕಾಡುಗೊಲ್ಲ ಸಂಸ್ಕೃತಿಯ ಬಗ್ಗೆ ಸಂಶೋಧನೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನವನ್ನು ಮಾಡಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಇ.ಎನ್.ವೆಂಕಟೇಶ್ ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಇಬ್ರಾಹಿಂ ಖಲೀಲ್ವುಲ್ಲಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನವಜಾಗೃತಿ ವಿಚಾರ ವೇದಿಕೆ ಸಂಚಾಲಕ ಚಿತ್ರಲಿಂಗಪ್ಪ, ವೇದಾವತಿ ಗಡಿನಾಡು ವೇದಿಕೆ, ಸೃಜನ ಸಂಸ್ಥೆಯ ಕಾರ್ಯಕರ್ತರು ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.