ಹಾಸನ: `ಪ್ರಜ್ಞಾವಂತ ಸಮಾಜ ಇಂದು ಬುದ್ಧ ತತ್ವದೆಡೆಗೆ ನಡೆಯುತ್ತಿದೆ. ನಾವೂ ಅದನ್ನು ಅನುಸರಿಸುವುದು ಅಗತ್ಯ. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಬುದ್ಧನ ತತ್ವಗಳನ್ನು ಅನುಸರಿಸುವುದು ಅನಿವಾರ್ಯ~ ಎಂದು ಬೆಂಗಳೂರಿನ ಸ್ಫೂರ್ತಿಧಾಮದ ಬೋಧಿದತ್ತ ಬಂತೇಜಿ ನುಡಿದರು.
2555ನೇ ಬುದ್ಧ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿಯು ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೌದ್ಧ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.`ಅಂಬೇಡ್ಕರ್ ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು. ಬುದ್ಧನ ಮಾರ್ಗದಲ್ಲಿ ನಡೆಯುವ ಮೂಲಕ ಅದನ್ನು ಸಾಕಾರಗೊಳಿಸಬಹುದು ಎಂಬ ನಂಬಿಕೆ ಇಟ್ಟಿದ್ದರು.
ಬುದ್ಧನ ಮಾರ್ಗದಲ್ಲೇ ನಡೆಯುವ ಮೂಲಕ ನಾವು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದೇ ಮೊದಲ ಬಾರಿ ರಾಜ್ಯಮಟ್ಟದಲ್ಲಿ ಬೌದ್ಧ ಸಮಾವೇಶ ನಡೆಯುತ್ತಿರುವುದು ಸಂತೋಷದ ವಿಚಾರ. ಇಂಥ ಸಮಾವೇಶಗಳು ಅಂಬೇಡ್ಕರ್ ಅವರ ಕನಸನ್ನು ನನಸಾಗಿಸಬಲ್ಲವು. ಸಮುದಾಯವನ್ನು ದಲಿತತ್ವದಿಂದ ಬುದ್ಧತ್ವದೆಡೆಗೆ ಎತ್ತುವ ಕೆಲಸವನ್ನು ಸಮಾವೇಶ ಮಾಡಬೇಕು~ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಂಡರು.