ಮಾನಸಿಕ ಹಾಗೂ ದೈಹಿಕ ವೈಕಲ್ಯಗಳಿದ್ದರೂ ಪ್ರತಿಭೆಗೇನೂ ಕೊರತೆ ಇರುವುದಿಲ್ಲ. ಇಂಥ ಮಕ್ಕಳಲ್ಲಿಯೂ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕ ತರಬೇತಿ ನೀಡಿದಲ್ಲಿ ಸಾಮಾನ್ಯರಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳಬಲ್ಲರು. ಹಾಗೂ ಇವರನ್ನು ಮುಖ್ಯವಾಹಿನಿಗೆ ತರುವುದರಲ್ಲಿ ಸಂದೇಹವಿಲ್ಲ.
ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಫಾರ್ ಮೆಂಟಲಿ ಚಾಲೆಂಜ್ಡ್ ಸಂಸ್ಥೆ ಸೋಮವಾರದಿಂದ (ಜ.23-24) ಮಂಗಳವಾರದವರೆಗೆ ರಾಜ್ಯ ಮಟ್ಟದ ಕ್ರೀಡಾ ಮಹೋತ್ಸವ ಆಯೋಜಿಸಿದೆ.
ಹೆಚ್ಚಿನ ಸಾಮರ್ಥ್ಯವುಳ್ಳವರ ಗುಂಪು , ಕಡಿಮೆ ಸಾಮರ್ಥ್ಯವುಳ್ಳವರ ಗುಂಪು ಎಂಬ ಎರಡು ವಿಭಾಗಗಳನ್ನು ಮಾಡಲಾಗಿದೆ.
ಇಲ್ಲಿ 100 ಮೀ, 200 ಮೀ, 400 ಮೀ ಹಾಗೂ 4x100 ರಿಲೇ ಸ್ಪರ್ಧೆ ಇರುತ್ತದೆ. ಜೊತೆಗೆ ಗುಂಡು ಎಸೆತ, ಉದ್ದಜಿಗಿತ ಹಾಗೂ ಎತ್ತರ ಜಿಗಿತ ಮೊದಲಾದ ಸ್ಪರ್ಧೆಗಳಿವೆ. ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.
ಈಗಾಗಲೇ ರಾಜ್ಯದ 30 ಕ್ಕೂ ಹೆಚ್ಚು ಸಂಸ್ಥೆಗಳು ನೋಂದಣಿ ಮಾಡಿದ್ದು, ಸುಮಾರು 450ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ವಸಂತಕುಮಾರ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 10.25ಕ್ಕೆ ಉದ್ಘಾಟನಾ ಸಮಾರಂಭ. ಉದ್ಘಾಟನೆ: ಉಪ ಮೇಯರ್ ಎಸ್. ಹರೀಶ್. ಅತಿಥಿಗಳು: ಡಾ.ಎಂ.ಕೆ. ಪಾಂಡುರಂಗಶೆಟ್ಟಿ, ವೆಂಕಟೇಶ್ ಎ. ಮಾಚಕನೂರು, ನಟ ಪ್ರೇಮ್, ಕುಮಾರಸ್ವಾಮಿ, ಎ.ಬಿ.ಆಂಜನೇಯ, ಸಿ.ವಿಶ್ವನಾಥ ಐಯರ್. ಅಧ್ಯಕ್ಷತೆ: ರಾಕೇಶ್ ಮಳ್ಳಿ.