ಕೆಂಗೇರಿ: ಮಾಗಡಿ ರಸ್ತೆಯ ಹೇರೋಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಈಚೆಗೆ ಅದ್ಧೂರಿಯಾಗಿ ನಡೆಯಿತು.
ಸ್ವಾಮಿಯ ಮೂರ್ತಿಯನ್ನು ರಥೋತ್ಸವದಲ್ಲಿ ಇಟ್ಟು ಪೂಜಿಸಿದ ನಂತರ ಭಕ್ತರು ಜೈಕಾರಗಳೊಂದಿಗೆ ರಥವನ್ನು ಎಳೆದರು.
ರಸ್ತೆಯ ಉದ್ದಕ್ಕೂ ಹೆಂಗಳೆಯರು ನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಬಣ್ಣದ ಬಟ್ಟೆಗಳನ್ನು ತೊಟ್ಟು ರಥಕ್ಕೆ ಆರತಿ ಹಿಡಿದು ಪೂಜಿಸಿದರು. ಮನೆಯ ಬಾಗಿಲಲ್ಲಿ ವಿವಿಧ ಬಗೆಯ ರಂಗೋಲಿಗಳು ಗಮನ ಸೆಳೆದವು.
ಯಕ್ಷಗಾನ, ವೀರಗಾಸೆ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಗಾರ್ಡಿ ಗೊಂಬೆ, ಪೂಜಾ ಕುಣಿತ, ಕಂಸಾಳೆ, ಸೋಮನ ಕುಣಿತ, ಕುಂಭ ಕಹಳೆ, ಡೋಲು, ಕೀಲು ಕುದುರೆ, ಗೊರವನ ಕುಣಿತ ಮೆರವಣಿಗೆಯ ಪ್ರಮುಖ ಆರ್ಕಷಣೆಯಾಗಿತ್ತು.