ತರೀಕೆರೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಇದನ್ನು ನಿವಾರಿಸಲು ರಾಜೀವ್ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ 20 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಹರಿಸುವ ರೂ 6.83 ಕೋಟಿ ಮೊತ್ತದ ಬೃಹತ್ ಯೋಜನೆ ಪ್ರಗತಿಯಲ್ಲಿದೆ.
ತಾಲ್ಲೂಕಿನ ಎಂ.ಸಿ.ಹಳ್ಳಿ ಬಳಿ ಭದ್ರಾ ಎಡದಂಡೆ ಕಾಲುವೆ ಬಳಿ ನೀರನ್ನು ಎತ್ತುವ ಬೃಹತ್ ಯಂತ್ರಗಳನ್ನು ಅಳವಡಿಸಿದ್ದು, ಅಲ್ಲಿಂದ ನೀರನ್ನು ಬೇಲೇನಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಬೃಹತ್ ನೀರು ಸಂಗ್ರಹಣಾ ಕೇಂದ್ರಕ್ಕೆ ಮೊದಲ ಹಂತದಲ್ಲಿ ನೀರನ್ನು ಹರಿಸಲು ಉದ್ದೇಶಿಸಿದೆ.
ಅಲ್ಲಿಂದ ಗುರುತ್ವಾಕರ್ಷಣೆಯ ಮೂಲಕ ತಾಲ್ಲೂಕಿನ ಬೇಲೇನಹಳ್ಳಿ, ಪಿರುಮೇನಹಳ್ಳಿ, ಪಿರುಮೇನಹಳ್ಳಿ ತಾಂಡ್ಯ, ಹಾದಿಕೆರೆ, ಇಟ್ಟಿಗೆ, ಎರೆಹಳ್ಳಿ, ಲಕ್ಷ್ಮಿಸಾಗರ, ರಾಗಿ ಬಸವನಹಳ್ಳಿ, ನಾಗೇನಹಳ್ಳಿ, ಗಣೇಶಪುರ, ಅಮೃತಾಪುರ, ಕುಂಟಿನಮಡು, ವಿಠಲಾಪುರ, ನೇರಲಕೆರೆ, ಮೇದಿಹಳ್ಳಿ, ಹುಣಸಘಟ್ಟ, ಮಿರಳೇನಹಳ್ಳಿ, ಹೊಸಳ್ಳಿ, ಹೊಸಳ್ಳಿ ತಾಂಡ್ಯ ಮತ್ತು ನರಸೀಪುರ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಹರಿಸಲಾಗುವುದು.
ಪ್ಲೊರೈಡ್ಯುಕ್ತ ನೀರು ಬಳಸುತ್ತಿರುವ ಗ್ರಾಮಗಳಿಗೆ ವರದಾನವಾಗಲಿರುವ ಮೊದಲ ಹಂತದ ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದ್ದು, ಮಳೆಗಾಲದ ನಂತರ ಎಲ್ಲಾ ಗ್ರಾಮಗಳಿಗೆ ಕೊಳವೆಯನ್ನು ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ.