ಶ್ರೀನಿವಾಸಪುರ: ತಾಲ್ಲೂಕಿನ ಜೋಡಿ ಲಕ್ಷ್ಮಿಸಾಗರ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 60 ಕುರಿಗಳು ಸುಟ್ಟು ಕರಕಲಾಗಿವೆ.
ಗ್ರಾಮದ ಐದು ಮನೆಗಳಿಗೆ ಸೇರಿದ ಕುರಿಗಳನ್ನು ಮೇಯಿಸುತ್ತಿದ್ದ ನರಸಿಂಹಪ್ಪ ಎಲ್ಲವನ್ನೂ ಹುಲ್ಲಿನ ಮನೆಯ ಒಂದೇ ಕಡೆ ಬಿಟ್ಟಿದ್ದರು. ಸೀಮೆಎಣ್ಣೆ ದೀಪ ಉರುಳಿ ಬಿದ್ದು ಬೆಳಗಿನ ಜಾವ 5 ಗಂಟೆ ವೇಳೆಗೆ ಮನೆಗೆ ಬೆಂಕಿ ಹೊತ್ತಿಕೊಂಡು ದುರ್ಘಟನೆ ಸಂಭವಿಸಿದೆ. ಎಸ್ಐ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗೌನಿಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಿ.ಸೋಮಶೇಖರ್, ಸದಸ್ಯ ಆರ್.ನಾರಾಯಣಸ್ವಾಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಶ್ರೀರಾಂರೆಡ್ಡಿ, ಸಹಾಯಕ ನಿರ್ದೇಶಕ ಡಾ.ಜಯರಾಂ ಭೇಟಿ ನೀಡಿದ್ದರು.