ಬೆಂಗಳೂರು: ಗೊಟ್ಟಿಗೆರೆಯ ಪಿಲ್ಲಗಾನಗಳ್ಳಿಯಲ್ಲಿ ಕವಿತಾ (10) ಎಂಬ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಬಾಲಕಿ ಗಂಭೀರ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಯಾಬ್ ಚಾಲಕ ವೆಂಕಟೇಶ್ ಅವರ ಮಗಳು ಕವಿತಾ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಆಕೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಆಕೆಯ ಚೀರಾಟದಿಂದ ರಸ್ತೆಯಲ್ಲಿ ಸಾಗುತ್ತಿದ್ದವರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
`ಆಕೆಯ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಶೇ 83ರಷ್ಟು ಭಾಗ ಸುಟ್ಟು ಹೋಗಿದೆ~ ಎಂದು ವೈದ್ಯರು ಹೇಳಿದ್ದಾರೆ. `ನಾಲ್ಕು ಮಂದಿ ಮುಖಕ್ಕೆ ಮುಸುಕು ಹಾಕಿಕೊಂಡು ಬಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು~ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಘಟನೆ ಸಂಬಂಧ ಶ್ರೀನಿವಾಸ್, ಹರೀಶ್ ಮತ್ತು ಪುಟ್ಟರಾಜು ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೂವರೂ ಈ ಹಿಂದೆ ಬಾಲಕಿ ತಂದೆ ವೆಂಕಟೇಶ್ ಜತೆಗೆ ಜಗಳವಾಗಿದ್ದರು. ದ್ವೇಷದಿಂದ ದುಷ್ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.