ಬೆಂಗಳೂರು: ಮಹಿಳೆಯೊಬ್ಬರು ಮಗಳಿಗೆ ಬೆಂಕಿ ಹಚ್ಚಿ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಬನಶಂಕರಿ ಎರಡನೇ ಹಂತದಲ್ಲಿ ನಡೆದಿದೆ.
ಕೆ.ಆರ್.ರಸ್ತೆಯ ಏಳನೇ ಅಡ್ಡರಸ್ತೆ ನಿವಾಸಿ ಎಸ್.ಆರ್.ಪ್ರಸಾದ್ ಅವರ ಪತ್ನಿ ದೀಪಾ (34) ಎಂಬುವವರೇ ಮಗಳು ಮುಕ್ತಾಳೊಂದಿಗೆ (7) ಆತ್ಮಹತ್ಯೆ ಮಾಡಿಕೊಂಡವರು. ಎಂಜಿನಿಯರ್ ಆಗಿರುವ ಪತಿ ಪ್ರಸಾದ್ ಅವರು ಹಿರಿಯ ಮಗಳು ಮೇಘಾ ಮತ್ತು ತಾಯಿಯೊಂದಿಗೆ ವಿಜಯನಗರದ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ಸಂದರ್ಭದಲ್ಲೇ ದೀಪಾ ಅವರು ಈ ಕೃತ್ಯ ಎಸಗಿದ್ದಾರೆ.
ತಮ್ಮ ಮನೆಯ ಮೊದಲನೇ ಮಹಡಿಯಲ್ಲಿ ಬಟ್ಟೆ ತೊಳೆಯಲೆಂದು ನಿರ್ಮಿಸಲಾದ ಆವರಣದ ಬಳಿ ಬಂದ ಅವರು ಮೊದಲು ಮಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ನಂತರ ತಾವೂ ಬೆಂಕಿ ಹಚ್ಚಿಕೊಂಡರು. ಮನೆಯಿಂದ ಹೊಗೆ ಬರುತ್ತಿದ್ದುದನ್ನು ನೋಡಿದ ಪಕ್ಕದ ಮನೆಯವರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಆದರೆ ಅದಾಗಲೇ ಇಬ್ಬರೂ ಕೊನೆಯುಸಿರೆಳೆದಿದ್ದರು. ನಂತರ ಶವಗಳನ್ನು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ) ಒಯ್ಯಲಾಯಿತು.
ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸರಗೊಂಡ ದೀಪಾ ಆತ್ಮಹತ್ಯೆ ಮಾಡಿಕೊಂಡ್ದ್ದಿದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.