ಬೆಂಗಳೂರು: ಬೈಯಪ್ಪನಹಳ್ಳಿ ಸಮೀಪದ ಗಜೇಂದ್ರನಗರದಲ್ಲಿ ಗುರುವಾರ ಸ್ಟೌನಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸರಳ (23) ಎಂಬುವರು ಸಾವನ್ನಪ್ಪಿದ್ದಾರೆ. ರಕ್ಷಣೆಗೆ ಧಾವಿಸಿದ ಮೃತರ ಪತಿ ಸರವಣ್ ಕೂಡ ಗಂಭೀರ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಂಪತಿಗೆ ಮೂರು ವರ್ಷದ ಧನುಷ್ ಎಂಬ ಗಂಡು ಮಗು ಹಾಗೂ ಎಂಟು ತಿಂಗಳ ಹೆಣ್ಣು ಮಗುವಿದೆ. ಸರಳ ಅವರು ಬೆಳಿಗ್ಗೆ ಸ್ಟೌನಲ್ಲಿ ನೀರು ಕಾಯಿಸಲು ಮುಂದಾದಾಗ ಸ್ಟೌ ಕೆಳಗುರುಳಿದೆ.
ಆಗ ಸೀಮೆಎಣ್ಣೆ ಚೆಲ್ಲಿದ್ದರಿಂದ ಬೆಂಕಿ ಇಡೀ ಮನೆಯನ್ನೇ ಆವರಿಸಿದ್ದು, ಸರಳ ಅವರ ಸೀರೆಗೂ ಹೊತ್ತಿಕೊಂಡಿದೆ. ಪತ್ನಿಯ ಚೀರಾಟ ಕೇಳಿದ ಸರವಣ್, ಕೂಡಲೇ ಗೋಣಿ ಚೀಲದೊಂದಿಗೆ ಪತ್ನಿಯ ರಕ್ಷಣೆಗೆ ಧಾವಿಸಿದಾಗ ಅವರಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.