ಬೆಂಗಳೂರು (ಐಎಎನ್ಎಸ್): ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವತಿಯರ ಮೇಲೆ ಗುರುವಾರ ತಡರಾತ್ರಿ 8 ಮಂದಿ ದುಷ್ಕರ್ಮಿಗಳು ಬಿಡದಿ ಸಮೀಪ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಶುಕ್ರವಾರ ಪ್ರಕರಣ ದಾಖಲಾಗಿದೆ.
ಈ ಮೂವರು ಯುವತಿಯರು ಬಿಡದಿಯಲ್ಲಿ ಬಾಡಿಗೆ ಮನೆವೊಂದರಲ್ಲಿ ವಾಸವಾಗಿದ್ದರು. ಗುರುವಾರ ತಡರಾತ್ರಿ ಇಲ್ಲಿನ ಬಾರ್ ಒಂದರಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸಾದರು. ಇವರನ್ನು ಬಾರಿನಿಂದಲೇ ಕಾರಿನಲ್ಲಿ ಹಿಂಬಾಲಿಸಿದ 8 ಮಂದಿ ದುಷ್ಕರ್ಮಿಗಳ ಗುಂಪು ಮನೆಯಿಂದ ಇವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದೆ. ಈ ಬಗ್ಗೆ ಈ ಮೂವರು ಯುವತಿಯರು ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗಿರುವುದನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಅವರು ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.
ಈಗಾಗಲೆ ತಮಗೆ ಸಾಕಷ್ಟು ಸುಳಿವುಗಳು ದೊರೆತಿದ್ದು, ಪ್ರಕರಣದ ತನಿಖೆಗೆ 5 ಮಂದಿಯ ಪೊಲೀಸ್ ತಂಡವೊಂದನ್ನು ರಚಿಸಲಾಗಿದೆ ಎಂದಿರುವ ಅವರು 2-3 ದಿನದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಮೂವರು ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಳೆದ ಶನಿವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಯುವತಿಯೊಬ್ಬರು 8 ಜನರ ತಂಡವು ತಮ್ಮನ್ನು ಸಾಮೂಹಿಕ ಅತ್ಯಾಚಾರ ಮಾಡಿತೆಂದು ದೂರು ನೀಡಿದ ಬೆನ್ನಲ್ಲೆ ಮತ್ತೆ ಇಂತಹ ಘಟನೆ ಜರುಗಿದ್ದು, ನಗರದ ಜನತೆ ತಲ್ಲಣಗೊಂಡಿದ್ದಾರೆ.