ಮಳವಳ್ಳಿ: ಕಾವೇರಿ ನದಿಪಾತ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 36 ಲಾರಿ ಹಾಗೂ ಎರಡು ಟ್ರ್ಯಾಕ್ಟರ್ಗಳನ್ನು ತಹಶೀಲ್ದಾರ್ ಬಿ.ವಾಣಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲ್ಲೂಕಿನ ವಾಸುವಳ್ಳಿ ಬೋರೆ, ನರಸಯ್ಯನ ದೊಡ್ಡಿ ರಸ್ತೆ, ಕುಂದೂರು ರಾವಣಿ ರಸ್ತೆ ಮೂಲಕ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಮರಳು ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂತು.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಬಿ.ವಾಣಿ, ~ಸರ್ಕಾರದ ನೂತನ ಮರಳು ನೀತಿ ಅನ್ವಯ ಲಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ನೀಡಿ ಮರಳನ್ನು ಹರಾಜು ಮಾಡಲಾಗುವುದು. ಇಂತಹ ಪ್ರಕರಣದಲ್ಲಿ ಭಾಗಿಯಾದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ರೂ. 25 ಸಾವಿರ ದಂಡ ವಿಧಿಸಬಹುದಾಗಿದೆ. ಲಾರಿ ಮಾಲೀಕರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮವೂ ಇದೆ~ ಎಂದರು.