ಗುಲ್ಬರ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಜನಸಂಖ್ಯೆಗೆ ಅನುಗುಣವಾಗಿ ರೈಲುಗಳಿಲ್ಲ. ಹೀಗಾಗಿ ದುಬಾರಿ ದರದ ಬಸ್ ಅಥವಾ ಇನ್ನೂ ದುಬಾರಿ ದರದ ವೋಲ್ವೊ ಬಸ್ ಪ್ರಯಾಣ ಅನಿವಾರ್ಯ.
ಬಹುತೇಕ ಜನರು ಬಸ್ಗಳನ್ನೇ ಅವಲಂಬಿಸಿದರೂ ಇನ್ನೂ ಎರಡು ರೈಲುಗಳಿಗಾಗುವಷ್ಟು ಜನರು ಪ್ರಯಾಣ ಸೌಲಭ್ಯಕ್ಕಾಗಿ ಚಡಪಡಿಸುತ್ತಿರುತ್ತಾರೆ. ಇವರಿಗೆ ಉದ್ಯಾನ ಅಥವಾ ಬಸವಾ ಎಕ್ಸಪ್ರೆಸ್ ರೈಲುಗಳೇ ಆಧಾರ. ಹೆಚ್ಚು ಮಂದಿ ಪ್ರಯಾಣಿಕರ ಒತ್ತಡವಿದ್ದರೂ ರೈಲ್ವೆ ಇಲಾಖೆ ಇಲ್ಲಿಂದಲೇ ಬೆಂಗಳೂರಿಗೆ ಒಂದು ಪ್ರತ್ಯೇಕ ರೈಲನ್ನು ಆರಂಭಿಸಬೇಕೆಂಬ ದಶಕದ ಬೇಡಿಕೆಗೆ ಸ್ಪಂದಿಸುತ್ತಿಲ್ಲ.
ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಬರಲಿರುವ ರೈಲ್ವೆ ಮುಂಗಡ ಪತ್ರದಲ್ಲಿ ಗುಲ್ಬರ್ಗ -ಬೆಂಗಳೂರು ಹೊಸ ರೈಲಿನ ಆರಂಭಕ್ಕೆ ಘೋಷಣೆ ಮಾಡಲಾಗುವುದು ಎಂದು ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿದ್ದಾರೆ. ಈ ಬಾರಿಯಾದರೂ ರೈಲು ಸಿಕ್ಕಿತೆ?