ಶ್ರೀರಂಗಪಟ್ಟಣ: ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದು ತಾಲ್ಲೂಕಿನ ಆರತಿ ಉಕ್ಕಡದ ಬಳಿ ಅಲೆದಾಡುತ್ತಿದ್ದ ಇಬ್ಬರು ಮಕ್ಕಳಿಗೆ ಹಣ್ಣು-ಕಾಯಿ ವ್ಯಾಪಾರಿಯೊಬ್ಬರು ಆಶ್ರಯ ನೀಡಿದ್ದಾರೆ.
ಬೆಂಗಳೂರಿನ ನಗರ್ತರ ಪೇಟೆಯಿಂದ ಬಂದಿದ್ದಾಗಿ ಹೇಳುವ ಈ ಮಕ್ಕಳು, ಅಲ್ಲಿನ ಶಾರದಾ ಶಾಲೆಯಲ್ಲಿ ಓದುತ್ತಿರುವುದಾಗಿ ತಿಳಿಸಿದ್ದಾರೆ. ಅಭಿ ಎಂಬ ಬಾಲಕ 6ನೇ ತರಗತಿ ಹಾಗೂ ಆತನ ತಂಗಿ ಅನ್ನಪೂರ್ಣ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ತಂದೆ ನಾಗೇಂದ್ರಪ್ಪ ಚಿನ್ನದ ಅಂಗಡಿಯಲ್ಲಿ ವಾಚ್ಮನ್ ಕೆಲಸ ಮಾಡುತ್ತಿದ್ದು, ತಾಯಿ ಪುಷ್ಪ ಮನೆ ಕೆಲಸ ಮಾಡುತ್ತಾರೆ ಎಂದು ಅಭಿ ಹೇಳುತ್ತಾನೆ.
ಗುರುವಾರ ತಡರಾತ್ರಿ 12 ಗಂಟೆ ಸಮಯದಲ್ಲಿ ಬೆಂಗಳೂರು ರೈಲು ನಿಲ್ದಾಣದಲ್ಲಿ ರೈಲಿಗೆ ಹತ್ತಿ ಮೈಸೂರಿಗೆ ಬಂದಿದ್ದು, ಅಲ್ಲಿಂದ ಪಾಂಡವಪುರ ನಿಲ್ದಾಣಕ್ಕೆ ಬಂದಿದ್ದಾರೆ. ಆರತಿ ಉಕ್ಕಡದ ದಾರಿ ಹಿಡಿದು ಬಂದ ಈ ಮಕ್ಕಳಿಗೆ ಏನು ಮಾಡಬೇಕೆಂದು ತೋಚದೆ ಅಳುತ್ತ ನಿಂತಿದ್ದಾಗ ದೇವಾಲಯದ ಬಳಿ ವ್ಯಾಪಾರ ಮಾಡುವ ಬಲರಾಂ ಎಂಬುವವರು ಕರೆದು ಊಟ ಹಾಕಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈ ಮಕ್ಕಳ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬಲರಾಂ ತಿಳಿಸಿದ್ದಾರೆ.