ನವದೆಹಲಿ, (ಪಿಟಿಐ): ಹೌರಾ ಮೂಲದ ರಾಮಕೃಷ್ಣ ಮಿಷನ್ ವಿವೇಕಾನಂದ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕ ಮಹಾನ್ ಮಹಾರಾಜ್ ಸೇರಿದಂತೆ 11 ಜನ ಹಿರಿಯ ವಿಜ್ಞಾನಿಗಳಿಗೆ ಪ್ರತಿಷ್ಠಿತ ‘ಶಾಂತಿ ಸ್ವರೂಪ್ ಭಟ್ನಾಗಾರ್’ ಪ್ರಶಸ್ತಿಗಳನ್ನು ಸೋಮವಾರ ಘೋಷಿಸಲಾಗಿದೆ.
ಗಣಿತ ವಿಜ್ಞಾನ ವಿಭಾಗದಲ್ಲಿ ಮಹಾರಾಜ್ ಮತ್ತು ಪಾಲಷ್ ಕುಮಾರ್ (ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಕೊಲ್ಕತ್ತಾ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿನೆಟಿಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಮಿತ್ ಪ್ರಕಾಶ್ ಶರ್ಮಾ (ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನಿಟಿಕ್ ಎಂಜಿನಿಯರಿಂಗ್ ಆಂಡ್ ಬಯೋಟೆಕ್ನಾಲಜಿ, ದೆಹಲಿ) ಮತ್ತು ಜೈವಿಕ ವಿಜ್ಞಾನ ವಿಭಾಗದಲ್ಲಿ ರಾಜನ್ ಶಂಕರ್ ನಾರಾಯಣನ್ (ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮೊಲಿಕ್ಯುಲರ್ ಬಯಾಲಜಿ ಹೈದರಾಬಾದ್) ಅವರು ಆಯ್ಕೆಯಾಗಿದ್ದಾರೆ.
ರಾಸಾಯನಿಕ ವಿಜ್ಞಾನ ವಿಭಾಗದ ಪ್ರಶಸ್ತಿಗೆ ಬಾಲಸುಬ್ರಮಣಿಯನ್ ಸುಂದರಂ (ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ ಡ ಸೈಂಟಿಫಿಕ್ ರಿಸರ್ಚ್, ಬೆಂಗಳೂರು) ಮತ್ತು ಗರಿಕಪತಿ ನರಹರಿ ಶಾಸ್ತ್ರಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಹೈದರಾಬಾದ್) ಅವರು ಆಯ್ಕೆಯಾಗಿದ್ದಾರೆ.
ಭೌತ ವಿಜ್ಞಾನ ವಿಭಾಗದಲ್ಲಿ ಶಿರಾಜ್ ಮಿನಿವಾಲಾ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್, ಮುಂಬೈ) ಮತ್ತು ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಕೆ.ನಾರಾಯಣಸ್ವಾಮಿ ಬಾಲಾಜಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು) ಪ್ರಶಸ್ತಿ ಪಡೆದಿದ್ದಾರೆ.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಶಿರ್ಷೇಂದು ಡೇ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗಪುರ) ಮತ್ತು ಉಪದ್ರಸ್ತ ರಾಮಮೂರ್ತಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಖರಗಪುರ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭೂ ವಿಜ್ಞಾನ ವಿಭಾಗದಲ್ಲಿ ಶಂಕರ ದೊರೆಸ್ವಾಮಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿನೊಗ್ರಫಿ, ಗೋವಾ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿಎಸ್ಐಆರ್ ಪ್ರತಿಷ್ಠಾನ ದಿನ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಿಲಾಸ್ ರಾವ್ ದೇಶಮುಖ್ ಅವರ ಉಪಸ್ಥಿತಿಯಲ್ಲಿ ಸಂಸ್ಥೆಯ ನಿರ್ದೇಶಕ ಸಮೀರ್ ಬ್ರಹ್ಮಾಚಾರಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ.
ಈ ಪ್ರಶಸ್ತಿಗಳಿಗೆ 45ರೊಳಗಿನ ವಯೋಮಾನದ ವಿಜ್ಞಾನಿಗಳು ಆರ್ಹರಾಗಿದ್ದು, ಪ್ರಶಸ್ತಿಯು ತಲಾ ರೂ. 5 ಲಕ್ಷ ನಗದು ಪುರಸ್ಕಾರ ಹೊಂದಿದೆ. ಪ್ರಧಾನ ಮಂತ್ರಿಗಳು ಈ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ವಿತರಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.