ವೃದ್ಧ ದಂಪತಿಯಾದ 99 ವರ್ಷದ ವೀರಭದ್ರಪ್ಪ, 89 ವರ್ಷದ ಪಾರ್ವತಮ್ಮ ‘ಆನಂದ ಗೋಕುಲ’ ಚಿತ್ರದಲ್ಲಿ ನಟಿಸಿದ್ದಾರೆ. ಜಗಳೂರು ಸಮೀಪ ಚಿಕ್ಕ ಅರಕೆರೆ ಗ್ರಾಮದ ಪಂಚಾಯ್ತಿ ಕಟ್ಟೆಯಲ್ಲಿ ಚಿತ್ರೀಕರಣ ನಡೆಯಿತು. ಹೆತ್ತವರಿಗೆ ಮೋಸ ಮಾಡಿದ 6 ಜನ ಮಕ್ಕಳಿಗೆ ಬುದ್ಧಿವಾದ ಹೇಳಿ ತಂದೆ ತಾಯಿ ಪರ ನ್ಯಾಯ ನೀಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಪಂಚಾಯ್ತಿ ಕಟ್ಟೆಯ ಮುಖ್ಯಸ್ಥರಾಗಿ ಹಿರಿಯ ನಟ ಸುದರ್ಶನ್ ಹಾಗೂ ಶೈಲಶ್ರಿ ದಂಪತಿ ನಟಿಸಿದ್ದರು. ಈಗಾಗಲೇ ಚಿತ್ರದ ಶೇ 80ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಉಳಿದ ಭಾಗದ ಚಿತ್ರೀಕರಣವನ್ನು ದಾವಣಗೆರೆಯ ಸುತ್ತಮುತ್ತ ಚಿತ್ರೀಕರಿಸಿಕೊಳ್ಳಲಾಗುವುದು ಎಂದು ಚಿತ್ರತಂಡ ಹೇಳಿದೆ.
ಆಲಿಜಾನ್ ಮತ್ತು ಚಿಕ್ಕ ಅರಕೆರೆ ನಾಗರಾಜ್ ನಿರ್ಮಿಸುತ್ತಿರುವ ಆರ್. ನಾಗೇಂದ್ರರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ‘ಆನಂದ ಗೋಕುಲ’. ಕೆ.ಕೆ.ಡ್ಯಾಮ್ ಛಾಯಾಗ್ರಹಣ, ರಾಜನ್ ನಾಗೇಂದ್ರ ಸಂಗೀತ, ಜಗ್ಗು ನೃತ್ಯ ನಿರ್ದೇಶನ, ರಾಜಶೇಖರ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ವಿ.ಸುಬ್ರಹ್ಮಣ್ಯ ಸಹ ನಿರ್ಮಾಪಕರು.
ಚಿತ್ರದ ಉಳಿದ ತಾರಾಗಣದಲ್ಲಿ ಸುಜಿತ್, ಸ್ವಾತಿ, ಬೀರಾದಾರ್, ಡಿಂಗ್ರಿ ನಾಗರಾಜ್, ಆಲಿಜಾನ್, ಸತ್ಯಜಿತ್, ಬ್ಯಾಂಕ್ ಜನಾರ್ದನ್, ಸಾಜನ್, ಸುಹೇಲ್, ವಸಂತ ಅಭಿನಯಿಸಿದ್ದಾರೆ.