ಮೈಸೂರು: `ಬೆಂಗಳೂರಿನಲ್ಲಿ 2012ರ ಫೆಬ್ರುವರಿ 10 ರಿಂದ 13ರ ವರೆಗೆ `ಆರೋಗ್ಯ ಎಕ್ಸ್ಪೋ~ ಅಂತರ ರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಆಯುಷ್ ಇಲಾಖೆ, ಯೋಗ ದಸರಾ ಉಪ ಸಮಿತಿ ಆಶ್ರಯದಲ್ಲಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಯೋಗ ಮತ್ತು ನ್ಯಾಚು ರೋಪತಿ ಸಮ್ಮೇಳನದಲ್ಲಿ ಮಾತನಾಡಿದರು.
`ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 6 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಯೋಗ ಪ್ರದರ್ಶನ, ಆರೋಗ್ಯ ತಪಾಸಣೆ ಇರುತ್ತದೆ. ವಿವಿಧ ಯೋಗ ಶಾಲೆ, ಸಂಸ್ಥೆಗಳ ಪ್ರತಿನಿಧಿಗಳೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ತಿಳಿಸಿದರು.
`ಪ್ರಸ್ತುತ ಮೈಸೂರಿನಲ್ಲಿ ನಡೆದಿರುವ ಹೋಲಿಸ್ಟಿಕ್ ಆರೋಗ್ಯ ಕುರಿತ ಎರಡು ದಿನಗಳ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಮುಂದಿನ ತಲೆಮಾರಿಗೆ ಯೋಗ ಮತ್ತು ನ್ಯಾಚುರೋಪತಿಯನ್ನು ವೈಜ್ಞಾನಿಕವಾಗಿ ಪರಿಚಯಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ~ ಎಂದರು.
ಆಯುಷ್ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಯೋಗ ಗುರು ಪದ್ಮಭೂಷಣ ಡಾ.ಬಿ.ಕೆ.ಎಸ್.ಐಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.
ಕೈಗಾರಿಕೋದ್ಯಮಿ ಡಾ.ಬಿ.ಆರ್.ಪೈ, ಡಾ.ಜಿ.ಎಂ. ವಾಮದೇವ, ಡಾ.ಎಚ್.ಆರ್.ನಾಗೇಂದ್ರ, ಡಾ.ಎಸ್.ಸೋಮಶೇಖರ್, ಡಾ.ಎನ್.ನಾಗೇಶ್, ಡಾ.ಗುಂಡೆ, ಡಾ.ನಾಗರತ್ನ, ಬಿ.ಧನ್ಯಕುಮಾರ್ ಹಾಜರಿದ್ದರು.