ಬೆಂಗಳೂರು: ಎಚ್ಐವಿಗೆ ಸಂಬಂಧಿಸಿದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಮ್ಮೇಳನ ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಎಚ್ಐವಿ ಹರಡದಂತೆ ಕೈಗೊಳ್ಳ ಬೇಕಾದ ನಿಯಂತ್ರಣ ಕ್ರಮಗಳು, ಎಚ್ಐವಿ ಪೀಡಿತರಿಗೆ ಕಲ್ಪಿಸಿಕೊಡ ಬೇಕಾದ ಸೌಲಭ್ಯಗಳ ಬಗ್ಗೆ ಸಮ್ಮೇಳನ ದಲ್ಲಿ ಚರ್ಚೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಯಿಗೆ ಎಚ್ಐವಿ ಇದ್ದರೆ ಮಗುವಿಗೆ ಹರಡದಂತೆ ತಡೆಯುವುದು. ಎಚ್ಐವಿ ಬಾರದಂತೆ ಕೈಗೊಳ್ಳ ಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಹಲವು ವಿಷಯಗಳು ಕುರಿತು ಚರ್ಚಿಸಲಾಗುವುದು ಎಂದರು.
ಆಂಧ್ರಪ್ರದೇಶ, ಕರ್ನಾಟಕ, ತಮಿಳು ನಾಡು, ಒಡಿಶಾ, ಪುದುಚೇರಿ, ಕೇರಳ, ಗೋವಾ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಚುನಾಯಿತ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಯವರು ಸಮಾವೇಶ ಉದ್ಘಾಟಿಸುವರು ಎಂದರು.
ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಎಚ್ಐವಿ ಪೀಡಿತರಿಗೆ ಈಗಾಗಲೇ 265 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇನ್ನೂ 2000 ಅರ್ಜಿಗಳು ಬಾಕಿ ಇವೆ ಎಂದರು.
ಎಪಿಎಲ್ ಪಡಿತರ ಚೀಟಿದಾರರಿಗೂ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ ಹಣಕಾಸು ಇಲಾಖೆ ಯೊಂದಿಗೆ ಚರ್ಚೆ ನಡೆದಿದೆ. ಆದಷ್ಟು ಬೇಗ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದರು.
ಎಂಟು ಮಂದಿ ಅಮಾನತು
ಆರೋಗ್ಯ ಕವಚ ಯೋಜನೆಯ 108 ಆಂಬುಲೆನ್ಸ್ನ 8 ಸಿಬ್ಬಂದಿಯನ್ನು ಜಿವಿಕೆ ಸಂಸ್ಥೆ ಅಮಾನತುಗೊಳಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುತ್ತಿದ್ದ ಆರೋಪದ ಮೇಲೆ ಸಂಸ್ಥೆಯು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದರು.