ಮೂಡುಬಿದಿರೆ: ನಿಡ್ಡೋಡಿಯಲ್ಲಿ ಪ್ರಸ್ತಾವಿತಗೊಂಡಿರುವ ಉಷ್ಣ ವಿದ್ಯುತ್ ಸ್ಥಾವರವು ನಿಡ್ಡೋಡಿಯಲ್ಲಿ ಸ್ಥಾಪನೆಯಾಗುತ್ತದೋ? ಇಲ್ಲವೋ? ಎಂಬುದರ ಬಗ್ಗೆ ಜನರಿಗೆ ಇನ್ನೂ ಸಂಶಯವಿದೆ. ಈ ಬಗ್ಗೆ ಜನರಿಗೆ ಸರಿಯಾದ ಉತ್ತರಬೇಕಾಗಿದೆ. ಈ ನಿಟ್ಟಿನಲ್ಲಿ ನಿಡ್ಡೋಡಿಯ ಮಾತೃಭೂಮಿ ಸಂರಕ್ಷಣಾ ಸಮಿತಿಯು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ‘ಬೆಂಗಳೂರು ಚಲೋ ಅಭಿಯಾನ’ ಹಮ್ಮಿಕೊಳ್ಳಬೇಕಾಗಿದೆ ಎಂದು ವಕೀಲ ಫೆಲಿಕ್ಸ್ ಕಾರ್ಡೋಜ ಸಲಹೆ ನೀಡಿದರು.
ನಿಡ್ಡೋಡಿಯ ಮಾತೃಭೂಮಿ ಸಂರಕ್ಷಣಾ ಸಮಿತಿಯು ಭಾನುವಾರ ಬಂಗೇರಪದವಿನ ನಾರಾಯಣ ಗುರು ಸಭಾಭವನದಲ್ಲಿ ಏರ್ಪಡಿಸಿದ ಸಭೆಯಲ್ಲಿ ಅವರು ಸಲಹೆ ನೀಡಿದರು.
‘ಸರ್ಕಾರಗಳು ಜನರ ಅಭಿಪ್ರಾಯಗಳನ್ನು ಕೇಳದೆ ಜನರ ಸ್ವಾತಂತ್ರ್ಯವನ್ನು ಕಿತ್ತು ಬಲಾತ್ಕಾರವಾಗಿ ನಿಡ್ಡೋಡಿ ಪ್ರದೇಶದಲ್ಲಿ 4000 ಮೆಗಾವ್ಯಾಟ್ನ ಉಷ್ಣವಿದ್ಯುತ್ ಸ್ಥಾವರ ಯೋಜನೆ ರೂಪಿಸಿರುವುದು ಸರಿಯಲ್ಲ. ಈ ಬಗ್ಗೆ ಜನರ ಹೋರಾಟಗಳು ಕೇವಲ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾಗಬಾರದು. ಪ್ರಜಾಪ್ರಭುತ್ವದ ಹೋರಾಟ ಪ್ರತಿದಿನವೂ ಅಗತ್ಯವಾಗಿ ಬೇಕು ಮತ್ತು ಪ್ರಾರಂಭದಿಂದಲೇ ಗಟ್ಟಿಗೊಳ್ಳಬೇಕು’ ಎಂದರು.
ನಿಡ್ಡೋಡಿ ಉಷ್ಣವಿದ್ಯುತ್ ಸರ್ಕಾರಕ್ಕೆ ಸಲ್ಲಿಸಿದ ಮನವಿಗಳು ಎಲ್ಲಿ ಹೋದವು? ಶಾಸಕರ ಎರಡು ಬಸ್ ಮಾಡಿಕೊಂಡು ಬೆಂಗಳೂರಿಗೆ ಹೋಗುವ ಎಂದು ಭರವಸೆ ಏನಾಯಿತು? 3 ಸಾವಿರ ಕಾರ್ಡ್ ಚಳವಳಿಗೆ ಉತ್ತರವಿಲ್ಲ, ಶಾಂತಿಯುತ ಪ್ರತಿಭಟನೆಗೆ ಬೆಲೆಕೊಡುತ್ತಿಲ್ಲ. ಶಾಸಕರು ವಿಧಾನಸಭೆಯಲ್ಲೂ ಸ್ಥಾವರದ ಬಗ್ಗೆ ಪ್ರಸ್ತಾವ ಮಾಡುತ್ತಿಲ್ಲ. ಮನವಿಗೆ ಹಿಂಬರಹ ಕೊಟ್ಟರೆ ಸಾಲದು. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ? ಎನ್ನುವ ಬಗ್ಗೆ ಸ್ಪಷ್ಟ ಮಾಹಿ
ಸೆ. 28ರ ಬೃಹತ್ ಜಾಥಾಕ್ಕೆ ಬೆಂಬಲ: ಐಸಿವೈಂ ಕೇಂದ್ರೀಯ ಸಮಿತಿ ಮಂಗಳೂರು ಆಶ್ರಯದಲ್ಲಿ ಬೆಂದೂರು ಚರ್ಚ್ನಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ನಡೆಯುವ ನಿಡ್ಡೋಡಿ ಉಳಿಸಿ ಬೃಹತ್ ಜಾಥಾಕ್ಕೆ ನಿಡ್ಡೋಡಿ ಹೋರಾಟ ಸಮಿತಿಗಳು ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಇದೇ 29ರಂದು ಸಂಜೆ 4 ಗಂಟೆಗೆ ನಂದಿಕೂರು ದುಷ್ಪರಿಣಾಮಗಳ ಸಾಕ್ಷ್ಯಚಿತ್ರ ನಡೆಯಲಿದ್ದು ಬಸ್ರೂರು ಬಳಕೆದಾರರ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
‘ರೈತರ ಚಿತ್ತ ಜಿಲ್ಲಾಧಿಕಾರಿಗಳತ್ತ’ ಎನ್ನುವ ಬೃಹತ್ ಜಾಥಾವನ್ನು ಶೀಘ್ರದಲ್ಲೇ ಮಾಡುವ ಬಗ್ಗೆ ಚರ್ಚೆ ನಡೆಯಿತು. ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಗದಿದಲ್ಲಿ ಚುನಾವಣೆ ಬಹಿಷ್ಕರಿಸುವುದೇ? ಎನ್ನುವುದು ಗ್ರಾಮಸ್ಥರ ಪ್ರಶ್ನೆ. ‘ಪ್ರಜಾಪ್ರಭುತ್ವದ ನಮ್ಮ ಹಕ್ಕನ್ನು ಪೋಲು ಮಾಡುವುದು ಬೇಡ. ಸರ್ಕಾರಕ್ಕೆ ಇಲ್ಲಿನ ಜನರ ಕಷ್ಟನಷ್ಟಗಳ ಬಗ್ಗೆ ವಿವರಿಸುವುದು. ನಿಡ್ಡೋಡಿ ಭೂಮಿ ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ ಎನ್ನುವುದು ದೃಢಸಂಕಲ್ಪ ಮತ್ತು ಬೆಂಗಳೂರು ಚಲೋ ಅಭಿಯಾನವನ್ನು ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿಸೋಜ, ಕಾರ್ಯಾಧ್ಯಕ್ಷ ಪೂವಪ್ಪ ಗೌಡ, ಉಪಾಧ್ಯಕ್ಷ ಭಾಸ್ಕರ್ ದೇವಸ್ಯ, ಸಮಿತಿಯ ಗೌರವಾಧ್ಯಕ್ಷ ಜಗನಾಥ ಶೆಟ್ಟಿ, ಕಾರ್ಯದರ್ಶಿ ವಿನೋಧರ, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ಜೋಕಿಂ ಕೊರೆಯ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುಧಾಕರ ಪೂಂಜಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
‘ನಿಡ್ಡೋಡಿ ಉಳಿಸಿ’ ಜಾಗೃತಿ ಮೂಡಿಸುವ ಸ್ಟಿಕ್ಕರನ್ನು ಬಿಡುಗಡೆಗೊಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.