ಬೆಂಗಳೂರು: ಇರಾನ್ ದೇಶದ ನಿರ್ದೇಶಕಿ ಪೌರನ್ ದೇರಾಕ್ಷಾಂದ್ಹೇ, ಜರ್ಮನಿಯ ಹಾಫ್ ಚಿತ್ರೋತ್ಸವದ ನಿರ್ದೇಶಕ ಹೈನ್ಸ್ ಜಾರ್ಜ್ ಭಡೇವಿಟ್ಸ್ ಸೇರಿದಂತೆ 20 ಮಂದಿ ವಿದೇಶಿ ಪ್ರತಿನಿಧಿಗಳು ಹಾಗೂ 57 ಮಂದಿ ಗಣ್ಯರು 6ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದರು.
ಸಿನಿಮೋತ್ಸವದಲ್ಲಿ ಚಿತ್ರ ವೀಕ್ಷಣೆಗಾಗಿ ಈಗಾಗಲೇ 1,500 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಬುಧವಾರದ ವೇಳೆಗೆ ಮೂರು ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಬಾರಿ ಸಿನಿಮೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದು, ಕೆಲವು ಸಮಸ್ಯೆಗಳು ಉಂಟಾಗಿದ್ದವು.
ಆದರೆ ಈ ಬಾರಿ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರೇಕ್ಷಕರ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸ್ಥಳಾವಕಾಶ ಇರುವ ಚಿತ್ರ ಮಂದಿರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ವಿಚಾರ ಸಂಕಿರಣ: ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಇದೇ 27ರಂದು ‘ಪ್ರಾದೇಶಿಕ ಚಿತ್ರಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ’, 29ಕ್ಕೆ ‘ಡಿಜಿಟಲ್ ಕ್ಯಾಮರಾ’ ಹಾಗೂ 30ಕ್ಕೆ ‘ಡಿಜಿಟಲ್ ಶಬ್ದ ಗ್ರಹಣ’ ವಿಷಯ ಕುರಿತಂತೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ವಿಚಾರಸಂಕಿರಣದಲ್ಲಿ ಭಾಗವಹಿಸಲು ಇಚ್ಛಿಸುವವರು seminor@biffes.in ಹಾಗೂ ದೂರವಾಣಿ 9845101811 ಮೂಲಕ ಸಂಪರ್ಕಿಸಬಹುದು.
ಕಲಾತ್ಮಕ ನಿರ್ದೇಶಕ ಎಚ್.ಎನ್.ನರಹರಿ ರಾವ್ ಮಾತನಾಡಿ, ಎರಡು ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಸಿನಿಮೋತ್ಸವದಲ್ಲಿ ಜಾಗತಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಅದರಲ್ಲಿ ಉದ್ಘಾಟನಾ ಚಿತ್ರವಾಗಿ ಇರಾಕ್ನ ಕರ್ಜಾನ್ ಖಾದರ್ ನಿರ್ದೇಶನದ ‘ಬೇಕಾಸ್’ (2012/ 97 ನಿಮಿಷ) ಕಲರ್ ಚಲನಚಿತ್ರ ಹಾಗೂ ಸಮಾರೋಪ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಕಿಮ್ ಮೋರ್ಡೋಂ ನಿರ್ದೇಶನದ ‘ದ ರಾಕೆಟ್’ (2013/ 96 ನಿಮಿಷ)ನ್ನು ಕೊನೆಯ ಚಿತ್ರವಾಗಿ ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.
ನುರಿತ ಮಾನವ ಸಂಪನ್ಮೂಲದ ಕೊರತೆಯ ಜತೆಗೆ ಅತಿ ಕಡಿಮೆ ವೆಚ್ಚದಲ್ಲಿ ಸಿನಿಮೋತ್ಸವವನ್ನು ಬಹಳ ಚೆನ್ನಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿನಿಧಿಗಳು ನೋಂದಾಯಿತ ಪಾಸ್ಗಳನ್ನು ಬಳಸಿಕೊಂಡು ಸಿನಿಮೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬಹುದು. ಆದರೆ ಪ್ರೇಕ್ಷಕರು ಹೆಸರುಗಳನ್ನು ನೋಂದಾಯಿಸಿಕೊಳ್ಳದೆ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು ಸ್ಪಷ್ಟಪಡಿಸಿದರು.
ಗುರುವಾರ (ಡಿ.26) ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿಯರಾದ ರಮ್ಯಾ, ರಾಧಿಕಾ ಪಂಡಿತ್, ನಟ ಸುದೀಪ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 2ರಂದು ಫನ್ ಸಿನಿಮಾಸ್ ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹಾಗೂ ನಟ ದರ್ಶನ್ ತೂಗುದೀಪ ಅವರು ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆ.ಆರ್. ನಿರಂಜನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.