ಬೆಂಗಳೂರು: ಕೊಬ್ಬರಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ನಿರ್ಧರಿಸಿರುವ ರಾಜ್ಯ ಸರ್ಕಾರ, ಉಂಡೆ ಕೊಬ್ಬರಿಯನ್ನು ರೈತರಿಂದ ಇನ್ನೂ 25 ಸಾವಿರ ಕ್ವಿಂಟಲ್ ಖರೀದಿಸಲು ನಿರ್ಧರಿಸಿದೆ.
ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 6,050 ರೂಪಾಯಿ ಬೆಲೆ ನಿಗದಿ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 5,350 ರೂಪಾಯಿ. ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ 700 ರೂಪಾಯಿ ನೀಡಲಿದೆ.
ಈ ದರದಲ್ಲಿ ಈಗಾಗಲೇ 50 ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿ ಮಾಡಿದ್ದು, ರೈತರಿಂದ ಬೇಡಿಕೆ ಹೆಚ್ಚಾಗಿರುವ ಕಾರಣ ಹೆಚ್ಚುವರಿಯಾಗಿ 25 ಸಾವಿರ ಕ್ವಿಂಟಲ್ ಖರೀದಿಸಲು ನಿರ್ಧರಿಸಲಾಗಿದೆ. ಸುಲಿದ ತೆಂಗಿನ ಕಾಯಿಗೆ ಪ್ರತಿ ಕ್ವಿಂಟಲ್ಗೆ 1,400 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ 1,000 ರೂಪಾಯಿ ಇದ್ದು, ಅದರ ಆಧಾರದ ಮೇಲೆ ರೂ 1,400 ನಿಗದಿ ಮಾಡಲಾಗಿದೆ.
ಈರುಳ್ಳಿಗೆ: ಗ್ರೇಡ್-1ರ ಪ್ರತಿ ಕ್ವಿಂಟಲ್ ಈರುಳ್ಳಿಗೆ ರೂ 760; ಗ್ರೇಡ್-2 ರೂ 560 ಮತ್ತು ಗ್ರೇಡ್-3 ದರ್ಜೆಗೆ 360 ರೂಪಾಯಿ ದರ ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಲ್ ಟೊಮೆಟೊಗೆ 250 ರೂಪಾಯಿ ನಿಗದಿ ಮಾಡಲಾಗಿದೆ. ಕ್ವಿಂಟಲ್ ಹೆಸರಿಗೆ 4,400 ರೂಪಾಯಿ ಮತ್ತು ಉದ್ದಿಗೆ 4,300 ರೂಪಾಯಿ ನಿಗದಿ ಮಾಡಲಾಗಿದೆ.