ಗಾಜಿಯಾಬಾದ್ (ಪಿಟಿಐ): ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಅಜಿತ್ ಸಿಂಗ್ ಅವರು ಸರ್ಕಾರಿ ನಿವಾಸ ತೊರೆಯುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು 18 ಜನರು ಗಾಯಗೊಂಡಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮತ್ತು ಆರ್ಎಲ್ಡಿ ಕಾರ್ಯಕರ್ತರು ಮುರಾದ್ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿದರು. ಗಂಗಾನಗರ್–ಮುರಾದ್ನಗರದಿಂದ ದೆಹಲಿಗೆ ನೀರು ಪೂರೈಕೆ ಕಡಿತಗೊಳಿಸುವ ಪ್ರಯತ್ನವನ್ನು ಪೊಲೀಸರು ತಡೆದರು.
‘ದೆಹಲಿಯ ನೀರು ಪೂರೈಕೆಯನ್ನು ಕಡಿತಗೊಳಿಸುವುದಾಗಿ ಪ್ರತಿಭಟನಾಕಾರರು ಮೊದಲೇ ಪ್ರಕಟಿಸಿದ್ದರು. ಅದಕ್ಕಾಗಿ ಆರ್ಎಲ್ಡಿ ಮತ್ತು ಭಾರತೀಯ ಕಿಸಾನ್ ಯೂನಿಯನ್ನ 10 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಜನರು ಕಲ್ಲು ಮತ್ತು ಬಾಟಲಿಗಳೊಂದಿಗೆ ಸಜ್ಜಾಗಿ ಬಂದಿದ್ದರಿಂದ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು’ ಎಂದು ಮೀರಠ್ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಶರ್ಮಾ ಹೇಳಿದ್ದಾರೆ.
ಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಷೆಲ್ ಮತ್ತು ರಬ್ಬರ್ ಗುಂಡು ಸಿಡಿಸಿದ್ದಾರೆ. ಅಧಿಕೃತ ನಿವಾಸ ತೆರವುಗೊಳಿಸಲು ನಿರಾಕರಿಸಿರುವ ಮಾಜಿ ಸಂಸದರಾದ ಅಜಿತ್ ಸಿಂಗ್, ಜಿತೇಂದ್ರ ಸಿಂಗ್, ಮೊಹಮ್ಮದ್ ಅಜರುದ್ದೀನ್ ನಿವಾಸಗಳ ವಿದ್ಯುತ್, ನೀರು ಸಂಪರ್ಕ ಸರ್ಕಾರ ಕಳೆದ ವಾರ ಕಡಿತಗೊಳಿಸಿದೆ.