ಕೊಪ್ಪಳ: ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಅಳವಂಡಿಯ ರೈತ ಸಂಪರ್ಕ ಕೇಂದ್ರದ ವತಿಯಿಂದ ಕಡಲೆ ಬೆಳೆ ತಾಲ್ಲೂಕುಮಟ್ಟದ ಕ್ಷೇತ್ರೋತ್ಸವ ಇತ್ತೀಚೆಗೆ ನಡೆಯಿತು.
ಕೃಷಿವಿಜ್ಞಾನಿ ಡಾ.ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ರೈತರು ತಾವು ಸಸಿಗಳ ಕುಡಿ ಚಿವುಟುವುದು, ಯೂರಿಯಾ ಸಿಂಪಡಣೆಯಿಂದ ಉತ್ತಮ ಬೆಳೆ ಬೆಳೆಯಬಹುದು, ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದೆಂದು ಸಲಹೆ ನೀಡಿದರು.
ಗ್ರಾಮದ ರೈತ ಗುರುಬಸಯ್ಯ ಬೃಹನ್ಮಠ ಅವರ ಹೊಲದಲ್ಲಿ ನಡೆದ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಸದಸ್ಯ ವೀರೇಶ್ ಸಜ್ಜನ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಶರಣಪ್ಪ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಶರಣಪ್ಪ ಮತ್ತೂರು, ಗವಿಸಿದ್ದಪ್ಪ ಮಾಳೆಕೊಪ್ಪ, ರೈತರಾದ ನಾರಾಯಣಪ್ಪ ಕೊರಣ್ಣವರ್, ಗ್ರಾಮದ ಹಿರಿಯರಾದ ಸೋಮಪ್ಪ ಮತ್ತೂರು, ಕೃಷಿ ಅಧಿಕಾರಿಗಳಾದ ವಿ.ಎನ್.ಮ್ಯಾಗೇರಿ, ಪಿ.ಬಿ.ಕುಲಕರ್ಣಿ, ರೈತ ಅನುವುಗಾರ ಏಳೂಕೋಟೇಶ ಕೋಮಲಾಪುರ ಭಾಗವಹಿಸಿದ್ದರು. ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾರ ಕಾರ್ಯಕ್ರಮ ನಿರೂಪಿಸಿದರು. ಶಿವನಗೌಡ ನಾಗರಡ್ಡಿ ವಂದಿಸಿದರು.