ಹಿರಿಯೂರು: ಎಸ್ಜೆಎಸ್ಆರ್ವೈ ಯೋಜನೆ ನಿರ್ವಹಿಸುವ ಸಿಬ್ಬಂದಿಯೊಬ್ಬರ ಮೇಲೆ ಮಂಗಳವಾರ ಪುರಸಭೆ ಸದಸ್ಯೆಯೊಬ್ಬರ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಲು ಯತ್ನಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬುಧವಾರ ಪುರಸಭೆ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಧರಣಿ ನಡೆಸಿದರು.
ಸಿಬ್ಬಂದಿಗೆ ರಕ್ಷಣೆ ನೀಡಬೇಕಿದೆ. ಆಡಳಿತದಲ್ಲಿ ಪತಿಯಂದಿರ ಹಸ್ತಕ್ಷೇಪ ನಿಲ್ಲಬೇಕು. ಪುರಸಭೆ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸ್ವಚ್ಛತೆ ಸೇರಿದಂತೆ ಎಲ್ಲ ಕೆಲಸಗಳನ್ನು ಬಹಿಷ್ಕರಿಸಿ ಧರಣಿ ನಡೆಸಬೇಕಾಗುತ್ತದೆ ಎಂದು ಧರಣಿನಿರತರು ಪಟ್ಟು ಹಿಡಿದರು.
ಪುರಸಭಾಧ್ಯಕ್ಷೆ ಮಂಜುಳಾ, ಮುಖ್ಯಾಧಿಕಾರಿ ಜಯಣ್ಣ, ಹಿರಿಯ ಸದಸ್ಯರಾದ ಜಿ. ಧನಂಜಯಕುಮಾರ್, ಪನ್ನೀರ್ಸೆಲ್ವಂ, ರಾಜಪ್ಪ, ದಲೀಚಂದ್ ಮಹಿಳಾ ಸದಸ್ಯೆಯನ್ನು ಕರೆಸಿ ಘಟನೆ ಬಗ್ಗೆ ಕ್ಷಮೆ ಯಾಚಿಸುವಂತೆ ಮಾಡಿದ್ದರಿಂದ ಧರಣಿ ಹಿಂದೆ ಪಡೆಯಲಾಯಿತು.
ಘಟನೆಯ ಕುರಿತು ನಗರ ಪೊಲೀಸ್ ಠಾಣೆಗೆ ದೂರು ಕೊಡಲಾಗಿದ್ದು, ಧರಣಿ ಮಾತ್ರ ಹಿಂದೆ ಪಡೆದಿದ್ದೇವೆ. ದೂರನ್ನು ಹಿಂಪಡೆದಿಲ್ಲ ಎಂದು ಪೌರನೌಕರರ ಸಂಘದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.ಧರಣಿಯಲ್ಲಿ ಸಿ.ಆರ್. ಪ್ರಭಾಕರ ಮೂರ್ತಿ, ಟಿ. ಕೆಂಚರಾಯಪ್ಪ, ಶಿವಣ್ಣ, ಬಿ. ದುರ್ಗೇಶ್, ಬಿ. ನಾಗಪ್ಪ, ಕೆ. ಕದುರಪ್ಪ, ಎಸ್. ರಮೇಶ್, ಎಸ್. ಪಾಪಣ್ಣ, ಆರ್. ಮೂರ್ತಿ, ಶಿವಣ್ಣ, ಆರ್. ರೇವಣಸಿದ್ದೇಶ್ವರ, ಟಿ. ದ್ಯಾಮಣ್ಣ ಪಾಲ್ಗೊಂಡಿದ್ದರು.