ಶಿರಸಿ: ಒಂದರ ಹಿಂದೊಂದರಂತೆ ಶರವೇಗದಲ್ಲಿ ಓಡುವ ಹೋರಿಗಳು, ಹೋರಿಯ ಹಿಂದೆ ಧಾವಿಸಿ ಓಡುವ ಯುವಪಡೆಯ ಸಂಭ್ರಮದ ನಡುವೆ ತಾಲ್ಲೂಕಿನ ಮಾಳಂಜಿಯಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಸೋಮವಾರ ನಡೆಯಿತು. ಶಿವಮೊಗ್ಗ, ಧಾರವಾಡ, ಹಾವೇರಿ, ದಾವಣಗೆರೆ, ವಿಜಾಪುರ ಸೇರಿದಂತೆ ವಿವಿಧ ಭಾಗಗಳ 500ಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪೈಪೋಟಿ ಒಡ್ಡಿದವು.
ಉತ್ತರ ಕರ್ನಾಟಕದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವಿಶೇಷ ಮನರಂಜನೆ. ಉತ್ತರ ಕರ್ನಾಟಕ ಭಾಗದ ಪ್ರಭಾವವಿರುವ ತಾಲ್ಲೂಕಿನ ಪೂರ್ವ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ವಿಶೇಷ ಪ್ರಾಧಾನ್ಯತೆ ಇದೆ. ಸ್ಥಳೀಯ ರೈತ ಜಾತ್ರೆ ಅಂಗವಾಗಿ ರೈತರು ಒಟ್ಟಾಗಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು.
ಕೃಷಿಕರು ರಿಕ್ಷಾ, ಟ್ರಾಕ್ಟರ್ಗಳಲ್ಲಿ ಹೋರಿಗಳನ್ನು ಹೊತ್ತು ತಂದರು. ಬಲೂನು, ವಿಶೇಷ ಅಲಂಕಾರಗಳಿಂದ ಶೃಂಗರಿಸಿದ್ದ ಹೋರಿಗಳು ಆಕರ್ಷಣೆಯ ಕೇಂದ್ರಗಳಾಗಿದ್ದವು. ಮಾಲೀಕನ ಕೈಯಿಂದ ಮೂಗುದಾಣ ಕಳಚಿಕೊಂಡು ಶರವೇಗದಲ್ಲಿ ಓಡಿದ ಹೋರಿಗಳ ಕುತ್ತಿಗೆಯಲ್ಲಿರುವ ಕೊಬ್ಬರಿ, ದುಡ್ಡಿನ ಹಾರ ಹರಿಯಲು ಯುವಕರ ದಂಡು ಸನ್ನದ್ಧವಾಗಿತ್ತು. ಸಣ್ಣಪುಟ್ಟ ಅವಗಢ ಲೆಕ್ಕಿಸದೆ ಯುವಕರು ಹೋರಿ ಕೊರಳಿನ ಹಾರ ಹರಿದು ಗಮನ ಸೆಳೆದರು.
ಯುವ ಮುಖಂಡ ಕುಮಾರ ಬಂಗಾರಪ್ಪ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಥಳೀಯ ಮುಖಂಡ ಸಿ.ಎಫ್.ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ಹೆಗಡೆ, ತಾ.ಪಂ. ಸದಸ್ಯ ಸುನೀಲ ನಾಯ್ಕ ಇತರರು ಇದ್ದರು.
ಹಣ್ಣು ವಿತರಣೆ
ಶಿರಸಿ: ಶ್ರೀಪಾದ ಹೆಗಡೆ ಕಡವೆ 87ನೇ ಜನ್ಮದಿನಾಚರಣೆ ಅಂಗವಾಗಿ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.
ಎಸ್.ಆರ್.ಕಡವೆ ಅಭ್ಯುದಯ ಸಂಸ್ಥೆ ಮತ್ತು ಟಿಎಸ್ಎಸ್ ಆಸ್ಪತ್ರೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಆಸ್ಪತ್ರೆಯ ಟ್ರಸ್ಟಿ ಎಂ.ಪಿ. ಹೆಗಡೆ ಬಪ್ಪನಳ್ಳಿ, ಎಸ್.ಕೆ.ಭಾಗವತ, ಎಸ್. ಎಂ. ಹೆಗಡೆ ಮಾನಿಮನೆ, ರಮೇಶ ದುಬಾಶಿ, ಶ್ರೀಪಾದ ಹೆಗಡೆ, ವಿ.ಎಸ್. ನಾಯ್ಕ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.