ಕೆಜಿಎಫ್: ಅವಧಿ ಮೀರಿದ ಔಷಧಿಗಳು, ಸಮಾರಂಭಗಳ ತ್ಯಾಜ್ಯ, ರಾಶಿಗಟ್ಟಲೆ ಪ್ಲಾಸ್ಟಿಕ್ ಚೀಲಗಳು.. ಹೀಗೆ ಪರಿಸರಕ್ಕೆ ಧಕ್ಕೆ ಮಾಡಲು ಏನೇನು ಬೇಕೋ ಅವೆಲ್ಲದರ ಶೇಖರಣಾ ಕೇಂದ್ರವಾಗಿ ಬೆಮಲ್ ಕಾರ್ಖಾನೆಯ ಮೈದಾನ ಮಾರ್ಪಟ್ಟಿದೆ.
ಬೇತಮಂಗಲ ರಸ್ತೆಯಲ್ಲಿ ಎಚ್ ಅಂಡ್ ಪಿ ಪಕ್ಕದಲ್ಲಿರುವ ಬೃಹತ್ ಮೈದಾನವನ್ನು ಬಿಜಿಎಂಎಲ್ನಿಂದ ಎರವಲು ಪಡೆದ ಬೆಮಲ್ ಅದನ್ನು ಸುಸ್ಥಿತಿಯಲ್ಲಿಡಲು ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಅಪರೂಪದ ಕೃಷ್ಣಮೃಗಗಳಿಂದ ತುಂಬಿರುವ ಈ ಮೈದಾನ ಈಚೆಗೆ ಬಿದ್ದ ಮಳೆಯಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಕೃಷ್ಣಮೃಗಗಳ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೂ ಅದೇ ಗೋಮಾಳವಾಗಿ ಪರಿಣಮಿಸಿದೆ. ಅಲ್ಲಲ್ಲಿ ಹೊಂಡದಲ್ಲಿ ತುಂಬಿರುವ ನೀರು ಪ್ರಾಣಿಗಳಿಗೆ ಜಲಮೂಲವಾಗಿ ಪರಿಣಮಿಸಿದೆ. ಆದರೆ ಈ ನೀರನ್ನು ಕುಡಿಯುವ ಪ್ರಾಣಿಗಳು ಎಲ್ಲಿ ಅಸ್ವಸ್ಥಗೊಂಡು ಪ್ರಾಣ ತ್ಯಜಿಸುತ್ತವೆಯೋ ಎಂಬ ಭಯ ಕೂಡ ಕಾಡುತ್ತಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಲಿನಿಕ್ ನಡೆಸುವ ವೈದ್ಯರು ಈ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಸ್ಥಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬಗ್ಗೆ ಪರಿಸರ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿರುವುದನ್ನು ಕಡೆಗಣಿಸಿ ಈ ಜಾಗದಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.
ಮಳೆ ನೀರಿನೊಡನೆ ಸೇರುವ ವೈದ್ಯಕೀಯ ತ್ಯಾಜ್ಯ ಹೊಂಡಗಳಲ್ಲಿ ತುಂಬಿರುವ ನೀರಿನೊಡನೆ ಬೆರೆತಾಗಿದ್ದು, ಜಲವನ್ನು ಸಹ ಕಲುಷಿತಗೊಳಿಸಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಇದರ ಜೊತೆಗೆ ಮೈದಾನದಲ್ಲಿ ಅಲ್ಲಲ್ಲಿ ಸಿಗುವ ಒಂಟಿ ಮರಗಳ ಬುಡ ಮದ್ಯಪ್ರೇಮಿಗಳಿಗೆ ಆಶ್ರಯ ನೀಡಿದೆ. ಗುಂಪು ಗುಂಪಾಗಿ ಅಲ್ಲಿಗೆ ಬರುವ ಪುಂಡರ ಗುಂಪು ಎಲ್ಲೆಂದರಲ್ಲಿ ಮದ್ಯ ಬಾಟಲಿಗಳನ್ನು ಎಸೆದು, ತಾವು ತಂದಿರುವ ಪದಾರ್ಥಗಳ ಪೊಟ್ಟಣವನ್ನು ಬಿಸಾಡಿ ಹೋಗುತ್ತಿದ್ದಾರೆ. ಬೇತಮಂಗಲ–ಬೆಮಲ್ ರಸ್ತೆಯಿಂದ ಒಮ್ಮೆ ಈ ಮೈದಾನವನ್ನು ಅವಲೋಕಿಸಿದರೆ ಸಾಕು. ಇಡೀ ಮೈದಾದದಲ್ಲಿ ಪ್ಲಾಸ್ಟಿಕ್ ಚೀಲಗಳ ರಾಶಿ ಎದ್ದು ಕಾಣುತ್ತದೆ.
ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಹೊಂದಿರುವ ಬೆಮಲ್ ಆಡಳಿತ ವರ್ಗ ತನ್ನ ಮಡಿಲಲ್ಲೇ ಈ ರೀತಿ ಪರಿಸರ ಹಾನಿಯಾಗುತ್ತಿರುವುದನ್ನು ಕಣ್ಣುಮುಚ್ಚಿಕೊಂಡು ನೋಡುತ್ತಿದೆ. ಅತಿಕ್ರಮಿಗಳ ಮೇಲೆ ಮೊಕದ್ದಮೆ ದಾಖಲಿಸಿದರೆ ಅತಿಕ್ರಮಣ ನಿಲ್ಲಬಹುದು ಎಂಬುದು ಪರಿಸರ ಪ್ರೇಮಿಗಳ ಆಶಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.