ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಆರ್ಥಿಕ ಅಥಃಪತನದ ಸಂಕೇತ: ಸಂಸದ ಪ್ರಹ್ಲಾದ ಜೋಶಿ

Last Updated 26 ಮೇ 2012, 5:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಪೆಟ್ರೋಲ್ ಬೆಲೆ ಏರಿಕೆ ಯುಪಿಎ ಸರ್ಕಾರದ ಆರ್ಥಿಕ ನಿರ್ವಹಣೆಯ ಅಥಃಪತನದ ಸಂಕೇತ. ಆರ್ಥಿಕ ನಿರ್ವಹಣೆಯಲ್ಲಿ ಬಿಗು ತರುವ ಮೂಲಕ ಪೆಟ್ರೋಲ್ ಬೆಲೆ ನಿಯಂತ್ರಿಸಲು ಕೇಂದ್ರ ಮುಂದಾಗಬೇಕು. ಅದು ಸಾಧ್ಯವಾಗದಿದ್ದರೆ ಲೋಕಸಭೆ ವಿಸರ್ಜಿಸಬೇಕು~ ಎಂದು ಸಂಸದ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದುರ್ಗದ ಬೈಲ್‌ನಿಂದ ಪ್ರಧಾನ ಅಂಚೆಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಎತ್ತಿನಗಾಡಿ ಹತ್ತಿ ಭಾಗವಹಿಸುವ ಮೂಲಕ ಅವರು ಗಮನಸೆಳೆದರು. ಪ್ರತಿಭಟನೆಯಲ್ಲಿದ್ದ ನೂರಾರು ಕಾರ್ಯಕರ್ತರು ಅಂಚೆಕಚೇರಿಯ ಬಾಗಿಲು ಬಲವಂತವಾಗಿ ಮುಚ್ಚಲು ಯುತ್ನಿಸಿದರು. ಈ ವೇಳೆ ಪೊಲೀಸರು ಮಧ್ಯೆಪ್ರವೇಶಿಸಿದರು.

`ಇದೇ 31ಕ್ಕೆ ಭಾರತ ಬಂದ್ ನಡೆಸಲು ಎನ್‌ಡಿಎ ಕರೆ ನೀಡಿದೆ. ಜನರು ಸ್ವಯಂಪ್ರೇರಣೆಯಿಂದ ಬಂದ್‌ನಲ್ಲಿ ಭಾಗವಹಿಸಿ ಜನಾಕ್ರೋಶ ಪ್ರದರ್ಶಿಸುವಂತೆ ತಿಳಿಸಿದೆ. ಬೆಲೆ ಇಳಿಸದಿದ್ದರೆ ಮುಂದಿನ ಹೋರಾಟದ ಸ್ವರೂಪವನ್ನು ರೂಪಿಸಲಾಗುವುದು~ ಎಂದು ಜೋಶಿ ಎಚ್ಚರಿಕೆ ನೀಡಿದರು.

`ಯುಪಿಎ ಸರ್ಕಾರ ಕಳೆದ ಮೂರು ವರ್ಷ ಅವಧಿಯಲ್ಲಿ 11 ಬಾರಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಿದೆ. ಸದ್ಯದಲ್ಲೆ ಡೀಸೆಲ್ ಮತ್ತು ಸೀಮೆ ಎಣ್ಣೆ ಬೆಲೆ ಏರಲಿದೆ ಎಂಬ ಮತ್ತೊಂದು ಊಹಾಪೋಹ ಹರಡಿದೆ. ಕಳೆದ 20 ವರ್ಷದಲ್ಲೆ ಅತೀ ಹೆಚ್ಚು ದರ ಒಮ್ಮೆಗೆ ಏರಿಸಿಸಿದ್ದು ಈ ಸರ್ಕಾರದ್ದು ಸಾಧನೆ. ಸಂಸತ್ ಅಧಿವೇಶನ ಮುಗಿಯುವುದನ್ನೆ ಕಾದ ಸರ್ಕಾರ, ಮೇ  22ರಂದು ಮೂರನೇ ವರ್ಷದ ಸಂಭ್ರಮಾಚರಣೆ ಮಾಡಿಕೊಂಡು ದೇಶದ ಜನತೆಗೆ ದೊಡ್ಡ ಕೊಡುಗೆ ನೀಡಿದೆ~ ಎಂದು ವ್ಯಂಗ್ಯವಾಡಿದರು.

`ರೂಪಾಯಿ ಮೌಲ್ಯ ಅಂತರರಾಷ್ಟ್ರೀಯವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ. ಉದ್ದಿಮೆದಾರರು ಬಂಡವಾಳ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಣದುಬ್ಬರ ಶೇ. 20ರಷ್ಟು ಏರಿದೆ. ಪ್ರಧಾನಿ ಮನಮೋಹನ್ ಸಿಂಗ್ ಉತ್ತಮ ಅರ್ಥಶಾಸ್ತ್ರಜ್ಞನಾಗಿದ್ದು, ಅವರ ಪ್ರಾಮಾಣಿಕತೆ ವಿಷಯದಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ ಯುಪಿಎ ಮತ್ತು ಸೋನಿಯಾ ಗಾಂಧಿ ಅವರ ಬೇಜವಾಬ್ದಾರಿ ಪರಿಣಾಮ ಸದ್ಯದ ಸ್ಥಿತಿ ಉಂಟಾಗಿದೆ~ ಎಂದು ಅವರು ದೂರಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಹುಡಾ ಸದಸ್ಯ ನಾಗೂಸಾ ಕಲಬುರ್ಗಿ, ಪಾಲಿಕೆ ಸದಸ್ಯರಾದ ಲಕ್ಷ್ಮಣ ಗಂಡಗಾಳೇಕರ ಮತ್ತಿತರರು ಭಾಗವಹಿಸಿದರು.

ಧಾರವಾಡದಲ್ಲಿ ಅಣಕು ಶವಯಾತ್ರೆ
ಧಾರವಾಡ: ಪೆಟ್ರೋಲ್ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಣಕು ಶವಯಾತ್ರೆ ನಡೆಸಿ ನಂತರ ಪ್ರತಿಕೃತಿ ದಹನ ಮಾಡುವ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಸುರೇಶ ಬೇದರೆ, ಈರಣ್ಣ ಹಪ್ಪಳಿ ಇವರ ನೇತೃತ್ವದಲ್ಲಿ ಶವ ಯಾತ್ರೆ ನಡೆಸಿದರು.
ಬೆಲೆ ಇಳಿಕೆಯಾಗದಿದ್ದಲ್ಲಿ ಪಕ್ಷವು ಇದೇ 31ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಹುಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ, ಮಾಜಿ ಮೇಯರ್ ಪೂರ್ಣಾ ಪಾಟೀಲ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಕಪಟಕರ್, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಅಶೋಕ ನಿಡವಣಿ, ಮುಖಂಡರಾದ ವೀರನಗೌಡ ಪಾಟೀಲ, ಶಿವಣ್ಣ ಬಡವಣ್ಣವರ, ಗ್ರಾಮೀಣ ಅಧ್ಯಕ್ಷ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಪಾಂಡುರಂಗ ಕಾರಕೂನ, ಮೋಹನ ರಾಮದುರ್ಗ ಹಾಜರಿದ್ದರು.

ನವಲಗುಂದ ವರದಿ: ಬಿಜೆಪಿನವಲಗುಂದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.   ಡಾ.ಎಂ.ಬಿ. ಮುನೇನಕೊಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಅವರಾದಿ, ಜಿ.ಪಂ. ಸದಸ್ಯೆ ಶಾಂತಾದೇವಿ ನಿಡವಣಿ, ವೀರಣ್ಣ ಚವಡಿ, ದುರಗಪ್ಪ ನಾಗಣ್ಣವರ, ರಾಮಲಿಂಗಪ್ಪ ಪೂಜಾರ, ಕಲ್ಲಯ್ಯ ಪುರದಣ್ಣವರ, ಪುರಸಭೆ ಸದಸ್ಯರಾದ ಆನಂದ ಜೋಶಿ, ನಾಗನಗೌಡ ಪಾಟೀಲ, ಸುಭಾಷ್‌ಗಾಳಪ್ಪನವರ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ದಾನಪ್ಪಗೌಡ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT