ಸವಣೂರ: ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ಪದೇ ಪದೇ ಇಂಧನ ಹಾಗೂ ದಿನ ಬಳಕೆ ವಸ್ತುಗಳು ಬೆಲೆ ಏರಿಕೆಯಾಗುತ್ತಿದ್ದು, ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಬೈಕ್ ತಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.
`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಲವು ಬಾರಿ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅವೈಜ್ಞಾನಿಕ ಆರ್ಥಿಕ ನೀತಿ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಆರ್ಥಿಕ ಶಿಸ್ತು ಇಲ್ಲದಿರುವ ಕಾರಣದಿಂದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದ್ದು, ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕುಸಿತ ಕಂಡಿದೆ. ಕೂಡಲೇ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆಯನ್ನು ವಾಪಾಸ್ಸು ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಸದಸ್ಯರಾದ ಮಾಲತೇಶ ಬಿಜ್ಜೂರ, ಎಪಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಸದಸ್ಯರಾದ ಗಂಗಾಧರ ಬಾಣದ, ಚಂದ್ರು ಆಡೂರ, ಹನಮಂತಪ್ಪ ದೊಡ್ಡಮನಿ, ಮಂತ್ರೋಡಿ ಗ್ರಾ.ಪಂ ಅಧ್ಯಕ್ಷ ನಿಂಗಪ್ಪ ಕಾಳಪ್ಪನವರ, ಸದಸ್ಯ ನಾಗಪ್ಪ ಮೇಟಿ, ಪುರಸಭೆ ಸದಸ್ಯರಾದ ಮಂಜುನಾಥ ಗಾಣಿಗೇರ, ಸಂಗಮೇಶ ಯರೇಶಿಮಿ, ಖಲಂದರ ಅಕ್ಕೂರ, ರಾಮಣ್ಣ ಸಂಕ್ಲಿಪುರ, ಶಿವಣ್ಣ ಜಡಿ, ಮುಖಂಡರಾದ ಬಸನಗೌಡ ಕೊಪ್ಪದ, ನಿಂಗಪ್ಪ ಯಲವಿಗಿ, ನಿಂಗಪ್ಪ ಬಂಕಾಪುರ, ಬಂಗಾರಿಗೌಡ ಬರದೂರ, ಷಣ್ಮುಖ ಹರಕೂಣಿ ಮತ್ತಿತರರು ಪಾಲ್ಗೊಂಡಿದ್ದರು.