ವೈಟ್ಫೀಲ್ಡ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಮಹದೇವಪುರ ಬಿಜೆಪಿ ಘಟಕ ಕಾರ್ಯಕರ್ತರು ಸೋಮವಾರ ಇಲ್ಲಿಗೆ ಸಮೀಪದ ಮಾರತ್ತಹಳ್ಳಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, `ಕೇಂದ್ರ ಸರ್ಕಾರ ಎರಡು ತಿಂಗಳಲ್ಲಿ ಎಂಟು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದು, ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ. ದಿನೇ ದಿನೇ ರೂಪಾಯಿ ಮೌಲ್ಯ ಕುಸಿತ ಆಗುತ್ತಿದ್ದು ದೇಶ ದಿವಾಳಿಯತ್ತ ಸಾಗಿದೆ. ಇದಲ್ಲದೆ ಅಗತ್ಯ ವಸ್ತುಗಳು, ಸಾರಿಗೆ ದರ ಹೆಚ್ಚಾಗಲಿದೆ ಇದಕ್ಕೆಲ್ಲ ಕೇಂದ್ರದ ಯುಪಿಎ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ' ಎಂದು ದೂರಿದರು.
ಮಹದೇವಪುರ ಬಿಜೆಪಿ ಘಟಕದ ಅಧ್ಯಕ್ಷ ಪಣತ್ತೂರು ವೆಂಕಟಸ್ವಾಮಿ ರೆಡ್ಡಿ, `ಅಡುಗೆ ಅನಿಲ ಇತರ ವಸ್ತುಗಳ ಬೆಲೆ ಏರಿಸುವ ಮೂಲಕ ಬಡವರ ಗಾಯದ ಮೇಲೆ ಬರೆ ಎಳೆದಿದೆ' ಎಂದು ಖಂಡಿಸಿದರು.