ಧಾರವಾಡ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಒಲೆ ಹೂಡಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕಿ ಸೀಮಾ ಮಸೂತಿ, ‘ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರವು ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬರೆಯನ್ನು ಜನಸಾಮಾನ್ಯರಿಗೆ ನೀಡುತ್ತಿರುವುದು ಖಂಡನೀಯ. ಬೆಲೆ ಏರಿಕೆಯಿಂದ ಜನರ ಬಾಳು ದುಸ್ತರವಾಗಿದೆ’ ಎಂದು ದೂರಿದರು.
‘ಕೇಂದ್ರ ಸರ್ಕಾರದ ಇಂಥ ನೀತಿಯಿಂದ ಜನತೆ ಬೇಸತ್ತಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದರು.
‘ಕೇಂದ್ರ ಸರ್ಕಾರ ಕೂಡಲೇ ಜನ ಸಾಮಾನ್ಯರ ಮೇಲೆ ಹೇರಿರುವ ಹೆಚ್ಚಿನ ಹೊರೆಯನ್ನು ಹಿಂಪಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಮಹಿಳೆಯರು ಉಗ್ರ ಹೋರಾಟಕ್ಕೆ ಮುಂದಾಗುತ್ತಾರೆ’ ಎಂದು ಅವರು ಹೇಳಿದರು.
ನಂತರ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಮನವಿ ಪತ್ರವೊಂದನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ನಗರ ಮಹಿಳಾ ಅಧ್ಯಕ್ಷೆ ಗೀತಾ ಪಾಟೀಲ, ಪುಷ್ಪಾ ನವಲಗುಂದ, ಮಾಜಿ ಮೇಯರ್ ಪೂರ್ಣಾ ಪಾಟೀಲ, ನಿರ್ಮಲಾ ಜವಳಿ, ಅನಸೂಯಾ ಹಿರೇಮಠ, ರೇಣುಕಾ ಕೋಳೆಕರ ಮುಂತಾದವರು ಮಾತನಾಡಿದರು.
ಗೀತಾ ನವಲೂರ, ರೂಪಾ ಪಾಲನಕರ, ಗೀತಾ ಮರಿಲಿಂಗಣ್ಣವರ, ಪ್ರೇಮಾ ಕೋಮಾರದೇಸಾಯಿ, ಬಸಮ್ಮ ಬಸರಿಕೊಪ್ಪ, ಗೀತಾ ಮುಗದ, ಜಯಶ್ರೀ ಮೋಟೆ, ಧನಲಕ್ಷ್ಮೀ ತೆರದಾಳ, ಲತಾ ಹಿರೇಮಠ, ಯಶೋದ ಕಟಾರೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.