ಗುಂಡ್ಲುಪೇಟೆ: ಕಲ್ಲಂಗಡಿ ಬೆಲೆ ನೆಲಕಚ್ಚಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಈ ಬಾರಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗಿದೆ. ರಂಜಾನ್ ಮಾಸದಲ್ಲಿ ಹೆಚ್ಚಾಗಿ ಮಾರಾಟವಾಗುವ ಕಲ್ಲಂಗಡಿಯನ್ನು ಈಗ ಕೇಳುವವರೇ ಇಲ್ಲ. ಈ ಮುಂಚೆ ಕೆಜಿಗೆ ರೂ.10 ಕ್ಕಿಂತ ಹೆಚ್ಚುಬೆಲೆ ಇತ್ತು. ಪ್ರಸ್ತುತ ಕೆ.ಜಿಗೆ 2 ರೂ. ಬೆಲೆ ಇಲ್ಲವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸಮೀಪದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ಖರೀದಿದಾರರು ಆಗಮಿಸಿ ಕಲ್ಲಂಗಡಿ ಖರೀದಿಸುತ್ತಿದ್ದರು, ಆದರೆ ಅಲ್ಲಿಯೂ ಬೆಲೆ ಇಲ್ಲದ ಕಾರಣ ಕೊಳ್ಳುವವರಿಲ್ಲದೆ ಕಲ್ಲಂಗಡಿ ಬೆಳೆಯನ್ನು ರೈತರು ಜಮೀನುಗಳಲ್ಲಿಯೇ ಬಿಟ್ಟು ಬಿಡುತ್ತಿದ್ದಾರೆ. ಬೆಳೆ ತೆಗೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಮಾಡಿದ ಖರ್ಚು ಸಿಗುತ್ತಿಲ್ಲ ಎನ್ನತ್ತಾರೆ ಕಲ್ಲಂಗಡಿ ಬೆಳೆಗಾರರು.
ಮೈಸೂರು-ನೀಲಗಿರಿ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲಂಗಡಿ ಹಣ್ಣು ಇಟ್ಟು ಮಾರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಬೆಲೆ ಕುಸಿತದಿಂದಾಗಿ ರಾತ್ರಿ ವೇಳೆ ಕಾವಲು ಕಾಯಲು ಆಗದೇ ಅಲ್ಲಿಯೇ ಬಿಟ್ಟು ಹೋಗುತ್ತಿದ್ದೇವೆ. ಈ ರಸ್ತೆಯಲ್ಲಿ ಸಂಚರಿಸುವ ಕೆಲವರು ರಾತ್ರಿ ವೇಳೆ ಕಲ್ಲಂಗಡಿ ಹಣ್ಣನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಕೃಷಿಕರು.
ತೋಟಗಾರಿಕೆ ಇಲಾಖೆ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಲ್ಲಂಗಡಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ರೈತರು ಒತ್ತಾಸಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ಕಲ್ಲಂಗಡಿ ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂಬುದು ಅನ್ನದಾತರ ಮೊರೆ.