ವಾಷಿಂಗ್ಟನ್ (ಪಿಟಿಐ): `ತೈಲೋತ್ಪನ್ನಗಳ ಬೆಲೆ ಏರಿಕೆ ರದ್ದುಗೊಳಿಸುವ ಸಾಧ್ಯತೆ ಇಲ್ಲವೇ ಇಲ್ಲ~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ತೈಲ ಉತ್ಪನ್ನಗಳ ಬೆಲೆ ಏರಿಕೆ ಜತೆಗೆ ಅಬಕಾರಿ, ಸೀಮಾ ಸುಂಕ ಕಡಿತಗೊಳಿಸಲೂ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದರಿಂದ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ರೂ 49 ಸಾವಿರ ಕೋಟಿಗಳಷ್ಟು ವರಮಾನ ನಷ್ಟ ಉಂಟಾಗಲಿದೆ. ತೆರಿಗೆ ಕಡಿತ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳಲಾಗಿದೆ. ಈ ಕೊರತೆಯನ್ನು ತೆರಿಗೆ ಸಂಗ್ರಹ ಹೆಚ್ಚಳ ಮತ್ತು ತೆರಿಗೆ ಪಾವತಿಯಲ್ಲಿನ ಸುಧಾರಣೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಪ್ರಣವ್, ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಾಂಧವ್ಯ ವೃದ್ಧಿ: ಆರ್ಥಿಕ ಬಾಂಧವ್ಯ ಇನ್ನಷ್ಟು ಬಲಪಡಿಸಲು ಭಾರತ ಮತ್ತು ಅಮೆರಿಕ ನಿರ್ಧರಿಸಿದ್ದು, ಇದರಿಂದ ಆರ್ಥಿಕತೆ, ಹಣಕಾಸು ವಲಯದ ಸುಧಾರಣೆ ಮತ್ತು ಮೂಲ ಸೌಕರ್ಯ ರಂಗದ ಹಣಕಾಸು ವಲಯಗಳಲ್ಲಿ ಉಭಯ ದೇಶಗಳ ಸಹಕಾರ ಹೆಚ್ಚಲಿದೆ. ಇಲ್ಲಿ ನಡೆದ ಅಮೆರಿಕ - ಭಾರತ ಆರ್ಥಿಕ ಮತ್ತು ಹಣಕಾಸು ಪಾಲುದಾರಿಕೆ ಸಭೆಯಲ್ಲಿ ಸಹಕಾರದ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ.