ಬೆಳಗಾವಿ: ಅಧಿಕೃತ ದಾಖಲೆಗಳು ಇಲ್ಲದೆ 3.12 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಸಾಗಿಸುತ್ತಿದ್ದ ಮುಂಬೈ ಮೂಲದ ಮೂವರನ್ನು ಇಲ್ಲಿನ ಶಹಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮುಂಬೈ ಮೂಲದ ಕಾಂತಿಲಾಲ್ ಚನ್ನಾಲಾಲ್ ಹವಾಲಾತ್, ಭರತಶಹಾ ಜುಗೇರಜಾಶಹಾ ಹಾಗೂ ಜೈಯೀಶ್ ಅವರನ್ನು ಬಂಧಿಸಿ ವಿಚಾರಿಸಿದಾಗ 9.62 ಕೆ.ಜಿ. ಚಿನ್ನಾಭರಣ ಮತ್ತು 1.74 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ.
ಈ ಬಗ್ಗೆ ಅವರಲ್ಲಿ ಯಾವುದೇ ಅಧಿಕೃತ ದಾಖಲೆ ಇರಲಿಲ್ಲ. ಆದ್ದರಿಂದ ಮೂವರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರ ವಿಚಾರಣೆ ಮುಂದುವರಿದಿದ್ದು, ಬಂಗಾರದ ಆಭರಣಗಳನ್ನು ಮತ್ತು ಇಷ್ಟೊಂದು ಪ್ರಮಾಣದ ನಗದು ಹಣ ಎಲ್ಲಿಂದ ತರಲಾಗಿದೆ, ಅವುಗಳನ್ನು ಯಾರಿಗೆ ಕೊಡಲು ಹೋಗುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.