ಬೆಳಗಾವಿ: ಹದಿನೆಂಟು ವರ್ಷಗಳ ನಂತರ ಆಕಾಶವಾಣಿ ಸಂಗೀತ ಸಮ್ಮೇಳನವು ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಇದೇ 25ರಂದು ಸಂಜೆ 6.30 ಗಂಟೆಗೆ ನಡೆಯಲಿದೆ. ಆಕಾಶವಾಣಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಎರಡು ಹಿಂದೂ ಸ್ತಾನಿ ಸಂಗೀತ ಕಛೇರಿಗಳು ನಡೆಯಲಿವೆ.
ಲಖನೌದ ಖ್ಯಾತ ಕಲಾವಿದ ಸತೀಶ ಚಂದ್ರ ಸಿತಾರವಾದನ ಹಾಗೂ ಕೋಲ್ಕ ತ್ತಾದ ಪಂಡಿತ್ ಸಮರೇಶ ಚೌದರಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ಸಂಗೀತಕ್ಕೆ ಮುಕುಂದ ಭಾಲೆ ತಬಲಾ ಸಾಥ್ ನೀಡಲಿದ್ದು, ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಅಖ್ತರ್ ಹಸನ್ ತಬಲಾ, ಪ್ರಮೋದ ಮರಾಠೆ ಹಾರ್ಮೋನಿಯಂ ಹಾಗೂ ಫೈಯಾಜ್ಖಾನ್ ಸಾರಂಗಿ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಗಳ ಧ್ವನಿ ಮುದ್ರಣ ಅನುಕ್ರಮವಾಗಿ ನವೆಂಬರ್ 24 ರಂದು ರಾತ್ರಿ 10 ಗಂಟೆಗೆ ಹಾಗೂ ನವೆಂಬರ್ 18ರಂದು ರಾತ್ರಿ 10 ಗಂಟೆಗೆ ಪ್ರಸಾರವಾಗಲಿವೆ.
2011ನೇ ಸಾಲಿನ ರಾಷ್ಟ್ರೀಯ ಆಕಾಶವಾಣಿ ಸಮ್ಮೇಳನದ ಕಛೇರಿಗ ಳನ್ನು ದೇಶದ ಆಯ್ದ 20 ಪ್ರಮುಖ ಕೇಂದ್ರಗಳಲ್ಲಿ ಸೆಪ್ಟೆಂಬರ್ 25ರಂದು ಸಂಜೆ ಏಕಕಾಲಕ್ಕೆ ಏರ್ಪಡಿಸಲಾಗಿದೆ. ಅವುಗಳ ಪೈಕಿ ಬೆಳಗಾವಿಯೂ ಒಂದು ಪ್ರಮುಖ ಕೇಂದ್ರವಾಗಿದೆ. ಬಹಳ ವರ್ಷಗಳ ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕೇಂದ್ರ ಬಿಂದು ಬೆಳಗಾವಿಯಲ್ಲಿ ಸಮ್ಮೇಳನ ನಡೆಯಲಿದೆ.
ದೇಶದ 20 ಆಯ್ದ ಕೇಂದ್ರಗಳಲ್ಲಿ 40ಕ್ಕೂ ಹೆಚ್ಚು ಹಿಂದೂಸ್ತಾನಿ ಹಾಗೂ ಕರ್ನಾಟಕ ಶೈಲಿಯ ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ. ಅಹಮದನಗರದಲ್ಲಿ ನಡೆಯುವ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಆಕಾಶವಾಣಿ ಧಾರವಾಡದ ಮೂರು ಕಲಾವಿದರು ಭಾಗವಹಿಸುತ್ತಿದ್ದಾರೆ. ಪಂಡಿತ ಕೈವಲ್ಯಕುಮಾರ ಗುರವ ಗಾಯನ ಪ್ರಸ್ತುತಪಡಿಸಲಿದ್ದು, ಅವರಿಗೆ ರವಿಕಿರಣ ನಾಕೋಡ ತಬಲಾ ಹಾಗೂ ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
2011ನೇ ಸಾಲಿನ ಆಕಾಶವಾಣಿ ಸಂಗೀತ ಸಮ್ಮೇಳನದ ಎಲ್ಲ ಕಚೇರಿಗಳ ಧ್ವನಿ ಮುದ್ರಣಗಳು ಅಕ್ಟೋಬರ್ 22ರಿಂದ ನವೆಂಬರ್ 30ರವರೆಗೆ ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿವೆ. ಬೆಳಗಾವಿಯ ಸಂಗೀತ ಸಮ್ಮೇಳನದ ಸಂದರ್ಭದಲ್ಲಿ ಆಕಾಶವಾಣಿಯ ಅಪರೂಪದ ಧ್ವನಿ ಭಂಡಾರದಿಂದ ಆಯ್ದ ಹಲವು ಅಮೂಲ್ಯ ಸಿಡಿಗಳ ಮಾರಾಟವನ್ನು ಏರ್ಪಡಿಸಲಾಗಿದೆ.
ಪ್ರಾರಂಭದಿಂದಲೂ ಆಕಾಶವಾಣಿ ಧಾರವಾಡದ ಪ್ರಸಾರ ವಲಯದಲ್ಲಿ ಸಂಗೀತ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿರುವುದು ಒಂದು ವಿಶೇಷ. ಸಾವಿರಕ್ಕೂ ಹೆಚ್ಚು ಅನುಮೋದಿತ ಹಾಗೂ ಉದಯೋನ್ಮುಖ ಸಂಗೀತ ಕಲಾವಿದರು ಆಕಾಶವಾಣಿ ಧಾರವಾಡದಿಂದ ಕಾರ್ಯಕ್ರಮ ನೀಡುತ್ತಿರುವುದು ಗಮನಾರ್ಹ ಸಂಗತಿ ಎಂದು ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ತಿಳಿಸಿದ್ದಾರೆ.
ಬಿವಿಬಿ ಹಳೆ ವಿದ್ಯಾರ್ಥಿಗಳ ಸಮಾವೇಶ ಇಂದು
ಬೆಳಗಾವಿ: ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಮಹಾ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ನಗರದ ಕೆಎಲ್ಇ ಡಾ. ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇದೇ 16ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಎಲ್ಲ ಹಳೆ ವಿದ್ಯಾರ್ಥಿಗಳು ಸಮಾವೇಶ ದಲ್ಲಿ ಪಾಲ್ಗೊಳ್ಳಬೇಕು ಎಂದು ಬಿವಿಬಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾದ ಪ್ರಾಚಾರ್ಯ ಡಾ. ಶರಣಬಸವ ಪಿಳ್ಳಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.