ಶ್ರೀರಂಗಪಟ್ಟಣ: 15 ಹಾಸಿಗೆಗಳ ತಾಲ್ಲೂಕಿನ ಬೆಳಗೊಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ಬೆಳಗೊಳದಲ್ಲಿ ರೂ.80 ಲಕ್ಷ ವೆಚ್ಚದ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ರಕ್ತ, ಮೂತ್ರ, ಕಫ ಪರೀಕ್ಷೆಗೆ ಅನುಕೂಲ ಆಗುವಂತೆ ಪ್ರಯೋಗಾಲಯ ಆರಂಭವಾಗುತ್ತಿದೆ. ಹೆರಿಗೆ ಯಾದ ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸೌಕರ್ಯ ಒದಗಿಸಲಾಗುತ್ತಿದೆ. 24 ಗಂಟೆ ಹೆರಿಗೆ ಸೌಲಭ್ಯ ಇರಲಿದೆ. ದಾದಿಯರು ಇಲ್ಲೇ ಉಳಿದು ರೋಗಿಗಳ ಉಪಚಾರ ಮಾಡಲಿ ಎಂಬ ಕಾರಣಕ್ಕೆ ವಾಸದ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
ತಾಲ್ಲೂಕಿನ ಇತರ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿಪಡಿಸುವ ಅಗತ್ಯವಿದೆ. ಅನುದಾನದ ಕೊರತೆಯಿಂದ ಆದ್ಯತೆ ಮೇರೆಗೆ ಆಸ್ಪತ್ರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗೊಳದ ಉದ್ಧೇಶಿತ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣ ಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಜಿ.ಪಂ. ಸದಸ್ಯ ಬಿ.ಟಿ.ಶ್ರೀನಿವಾಸ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಬಿ.ಎಂ.ಸ್ವಾಮಿಗೌಡ, ತಾ.ಪಂ. ಸದಸ್ಯ ಮಹದೇವಸ್ವಾಮಿ, ಯಜಮಾನ್ ದ್ಯಾವಣ್ಣ, ಗ್ರಾ.ಪಂ. ಸದಸ್ಯ ಬಿ.ವಿ.ಸುರೇಶ್ ಇತರರು ಇದ್ದರು.