ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳದ ರೈತರು ತಮ್ಮ ಜಮೀನಿಗೆ ನೀರು ಕೊಂಡೊಯ್ಯಲು ಕಾವೇರಿ ನದಿಗೆ ಭಾನುವಾರ ಕಿರು ಅಣೆ ನಿರ್ಮಿಸಿದರು.
ಎಡಮುರಿ ಬಳಿ ಕಾವೇರಿ ನದಿಗೆ ಕಲ್ಲು, ಮರಳಿನ ಚೀಲಗಳಿಂದನೆ ನಿರ್ಮಾಣ ಕಾರ್ಯ ನಡೆಯಿತು. ನಡುಗಡ್ಡೆಯಲ್ಲಿರುವ 150 ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರಿನ ಸಮಸ್ಯೆ ಉಂಟಾದ ಕಾರಣ ರೈತರೇ ಅಣೆ ನಿರ್ಮಾಣಕ್ಕೆ ಇಳಿದರು.
ಶಂಬುನಹಳ್ಳ ಪ್ರದೇಶದಲ್ಲಿ ಜಮೀನು ಹೊಂದಿರುವ ರೈತರು ಮನೆಗೆ ಒಬ್ಬೊಬ್ಬರಂತೆ ತಾತ್ಕಾಲಿಕ ಅಣೆ ನಿರ್ಮಿಸುವ ಕಾಯಕ ಮಾಡಿದರು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಅಣೆ ನಿರ್ಮಾಣ ಕಾರ್ಯ ಸಂಜೆ 5 ಗಂಟೆಯ ವರೆಗೆ ನಡೆಯಿತು. 50ಕ್ಕೂ ಹೆಚ್ಚು ರೈತರ ಶ್ರಮದ ಫಲವಾಗಿ ಸುಮಾರು 50 ಮೀಟರ್ ಉದ್ದದಷ್ಟು ಮರಳಿನ ಚೀಲದ ಅಣೆ ನಿರ್ಮಾಣವಾಯಿತು. ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿಯಿತು.
ಬೆಳಗೊಳ ಸಮೀಪದ ಶಂಭುನಹಳ್ಳದ ನಡುಗಡ್ಡೆಯಲ್ಲಿ ಜಮೀನು ಹೊಂದಿರುವ ರೈತರು ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದರೆ ಬೆಳೆ ಒಣಗುತ್ತದೆ. ಈ ಪ್ರದೇಶಕ್ಕೆ ಕಿರುಗಾಲುವೆ ನಿರ್ಮಿಸಿಕೊಡುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.
ಅದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ರೈತ ಜಗದೀಶ್ ಹೇಳುತ್ತಾರೆ. ನದಿಗೆ ಪ್ರತಿ ವರ್ಷ ಕಿರು ಅಣೆ ನಿರ್ಮಿಸುತ್ತೇವೆ. ಆದರೆ ನದಿಯಲ್ಲಿ ಪ್ರವಾಹ ಬಂದ ವೇಳೆ ಅದು ಕೊಚ್ಚಿ ಹೋಗುತ್ತದೆ. ಹಾಗಾಗಿ ಶಾಶ್ವತ ಅಣೆ ನಿರ್ಮಾಣ ಆಗಬೇಕು ಎಂದು ರೈತರಾದ ಚಲುವೇಗೌಡ, ದೊಡ್ಡದ್ಯಾವಣ್ಣ, ಸುಬ್ಬೇಗೌಡ ಇತರರು ಒತ್ತಾಯಿಸಿದ್ದಾರೆ.