ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ದೇಶದ ಸುಮಾರು 26.27 ದಶಲಕ್ಷ ಹೇಕ್ಟರ್ ಪ್ರದೇಶ ಮತ್ತು 17.61 ಕೋಟಿ ರೈತರು ರಾಷ್ಟ್ರೀಯ ಬೆಳೆ ವಿಮೆ ಯೋಜನೆ (ಎನ್ಎಐಎಸ್) ವ್ಯಾಪ್ತಿಗೆ ಬಂದಿದ್ದಾರೆ ಎಂದು ಸರ್ಕಾರ ಹೇಳಿದೆ.
ಹಿಂಗಾರು ಋತು 1999 ರಿಂದ 2010-11ರ ವರೆಗೆ ಸುಮಾರು 1,761 ಲಕ್ಷ ರೈತರು ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ. ಸರ್ಕಾರ ಈ ಯೋಜನೆಗಾಗಿ ಸುಮಾರು ್ಙ21,459 ಕೋಟಿ ಮೊತ್ತವನ್ನು ವಿನಿಯೋಗಿಸಿದ್ದು, 4.76 ಕೋಟಿ ರೈತರು ವಿಮೆ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಕಳೆದ 23 ಬೆಳೆ ಋತುಗಳಲ್ಲಿ ಬೆಳೆ ವಿಮೆ ನೀಡಲಾಗಿದ್ದು, ಸದ್ಯ 25 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೊಂಡಿದೆ. 2000-01ನೇ ಸಾಲಿನಲ್ಲಿ `ಎನ್ಎಐಎಸ್~ ವ್ಯಾಪ್ತಿಗೆ ಕೇವಲ 1.05 ಕೋಟಿ ರೈತರಿದ್ದರು. 2010-11ನೇ ಸಾಲಿನಲ್ಲಿ ಈ ಸಂಖ್ಯೆ 17.61 ಕೋಟಿಗೆ ಏರಿಕೆಯಾಗಿದೆ.
ರಾಷ್ಟ್ರೀಯ ಕೃಷಿ ವಿಮೆ ಯೋಜನೆಯ ಗರಿಷ್ಠ ಫಲಾನುಭವ ಪಡೆದ ರಾಜ್ಯ ಮಹಾರಾಷ್ಟ್ರ. ಇಲ್ಲಿನ ಸುಮಾರು 2.79 ಕೋಟಿ ರೈತರು ಇದುವರೆಗೆ ಬೆಳೆ ವಿಮೆ ಪಡೆದುಕೊಂಡಿದ್ದಾರೆ. ಎರಡನೆಯ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ಇದ್ದು, ಕ್ರಮವಾಗಿ 2.49 ಮತ್ತು 2.17 ಕೋಟಿ ರೈತರಿಗೆ ಯೋಜನೆ ಫಲಗಳು ಲಭಿಸಿವೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (1.87 ಕೋಟಿ ) ಮತ್ತು ರಾಜಸ್ತಾನ (1.50 ಕೋಟಿ) ಇವೆ.
ನೈಸರ್ಗಿಕ ವಿಕೋಪ, ಬರ, ಕೀಟ ಹಾವಳಿ ಸೇರಿದಂತೆ ಇತರೆ ಕಾರಣಗಳಿಂದ ಬೆಳೆ ನಷ್ಟವಾದರೆ, ರೈತರ ನೆರವಿಗೆ ಬರಲು, ಭಾರತೀಯ ಕೃಷಿ ವಿಮೆ ಕಂಪೆನಿ (ಎಐಸಿ) 1999ರಲ್ಲಿ `ಎನ್ಎಐಎಸ್~ ಜಾರಿಗೊಳಿಸಿದೆ.
2010-11ನೇ ಸಾಲಿನ ಹಿಂಗಾರು ಬೆಳೆ ಋತುವಿನಿಂದ ಸರ್ಕಾರ ದೇಶದ 50 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಹೊಸ `ರಾಷ್ಟ್ರೀಯ ಪರಿಷ್ಕೃತ ಬೆಳೆ ವಿಮೆ ಯೋಜನೆ~ಯನ್ನೂ ಜಾರಿಗೊಳಿಸಿದೆ. ಇದರಿಂದ ಇನ್ನಷ್ಟು ರೈತರಿಗೆ ವಿಮೆ ಸೌಲಭ್ಯ ಲಭಿಸಲಿದೆ.