ಮಂಡ್ಯ: `ಸಬ್ಸಿಡಿ, ಸಾಲ ಮನ್ನಾದಂತಹ ನೆರವುಗಳನ್ನು ರೈತನಿಗೆ ಕಲ್ಪಿಸುವ ಬದಲು, ಆತನ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಒತ್ತಾಯಿಸಿದರು.
ಕರ್ನಾಟಕ ಸಂಘ ಮಂಗಳವಾರ ನಗರದ ರೈತ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ'ಯನ್ನು ಮಂಡ್ಯ ತಾಲ್ಲೂಕು ಪಂಚೇಗೌಡನದೊಡ್ಡಿ ಗ್ರಾಮದ ಪ್ರಗತಿಪರ ರೈತ ಪಿ. ರಾಮಣ್ಣ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
`ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ರೈತರಿಗೆ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಸಬ್ಸಿಡಿ, ಸಾಲ ಮನ್ನಾದಂಥ ನೆರವು ನೀಡುವ ಬದಲು ಬಡ್ಡಿ ರಹಿತ ಸಾಲ ನೀಡಲು ಆಲೋಚಿಸಬೇಕು' ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ ಮಾತನಾಡಿ, `ಪರಂಪರೆಯ ಜ್ಞಾನದ ಜೊತೆಗೆ ಆಧುನಿಕತೆಯನ್ನು ಬೇಸಾಯದಲ್ಲಿ ಅಳವಡಿಸಿಕೊಳ್ಳಬೇಕು. ದೀರ್ಘಾವಧಿ ಬೆಳೆ ಜೊತೆಗೆ ಅಲ್ಪಾವಧಿ ಬೆಳೆಯನ್ನೂ ಬೆಳೆದಾಗ ರೈತರು ಲಾಭ ಪಡೆಯಲು ಸಾಧ್ಯವಾಗುತ್ತದೆ' ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ಪಿ.ರಾಮಣ್ಣ ಅವರಿಗೆ ಪ್ರಶಸ್ತಿಯ ಜೊತೆಗೆ 15 ಸಾವಿರ ರೂಪಾಯಿ ನಗದು, ಫಲಕವನ್ನು ನೀಡಿ ಗೌರವಿಸಲಾಯಿತು.
ಶಾಸಕರಾದ ಎನ್. ಚಲುವರಾಯಸ್ವಾಮಿ, ಎ.ಬಿ. ರಮೇಶ್ಬಾಬು ಬಂಡಿಸಿದ್ದೇಗೌಡ, ಬಿ. ರಾಮಕೃಷ್ಣ, ಮಾಜಿ ಶಾಸಕ ಎಂ. ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಇದ್ದರು.
ಮಾಜಿಶಾಸಕ ಎಂ. ಶ್ರೀನಿವಾಸ್ ತಮ್ಮ ಪೋಷಕರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಯಿಂದ ಪ್ರತಿ ವರ್ಷ ಪ್ರಗತಿಪರ ರೈತನಿಗೆ ಪ್ರಶಸ್ತಿ ನೀಡಲಾಗುತ್ತಿದೆ.