ಶಿಡ್ಲಘಟ್ಟ: ಪಟ್ಟಣದ ಹೊರವಲಯ ದ ಗೌಡನಕೆರೆ ಕಲುಷಿತಗೊಂಡಿದೆ. ಕಳೆ ಗಿಡಗಳು ಆವರಿಸಿದೆ. ಇದರ ನಡುವೆ ಬೆಳ್ಳಕ್ಕಿಗಳು ಬೀಡುಬಿಟ್ಟಿವೆ.
ಮಲಿನಗೊಂಡ ಕಪ್ಪು ನೀರಿನಲ್ಲಿ ಮೋಹಕ ಬಿಳಿಯ ಬಣ್ಣದ ಬೆಳ್ಳಕ್ಕಿಗಳ ಪ್ರತಿಫಲನ. ಹಸಿರು ಬಣ್ಣದ ಕಳೆ ಗಿಡಗಳ ಮೇಲೆ ಬಿಳಿಯ ಮುತ್ತಿನಂತೆ ಹರಡಿ ಕಂಗೊಳಿಸುವ ಬೆಳ್ಳಕ್ಕಿಗಳ ಹಿಂಡು ಜನರ ಕಣ್ಮನ ತಣಿಸುತ್ತವೆ.
ಯಾವುದಾದರೂ ವಾಹನದ ಶಬ್ದ ಜೋರಾಗಿ ಅಪ್ದಪಳಿಸಿದರೆ ಅಥವಾ ಹತ್ತಿರದಲ್ಲಿ ಯಾರಾದರೂ ಕಂಡು ಬಂದಾಗ ಧಿಗ್ಗನೆ ಗುಂಪು ಗುಂಪಾಗಿ ಚದುರಿ ಆಗಸಕ್ಕೆ ಹಾರುತ್ತವೆ. ಆಗಸದಲ್ಲಿ ವಿಹರಿಸಿ ಮತ್ತೊಮ್ಮೆ ಹಸಿರ ಕಳೆಗಿಡಗಳ ಮೇಲೆ ಬಂದು ಕುಳಿತುಕೊಳ್ಳ ದೃಶ್ಯ ಯಾರಿಗಾದರು ರಸಾನಂದ ಉಂಟು ಮಾಡುತ್ತದೆ.
ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು. ರಾಷ್ಟ್ರಕವಿ ಕುವೆಂಪು ಅವರ ಪ್ರಖ್ಯಾತ ಸಾಲುಗಳಿವು. ಕುಪ್ಪಳ್ಳಿಯ ಸಿಬ್ಬಲು ಗುಡ್ಡೆಯಿಂದ ಕೆಳಗೆ ಕಾಣುವ ತುಂಗಾ ನದಿ, ಸುತ್ತಲಿನ ಹಸಿರು, ನೀಲಿ ಆಗಸದ ಹಿನ್ನೆಯಲ್ಲಿ ಹಾರುವ ಕೊಕ್ಕರೆಗಳ ಗುಂಪನ್ನು ಕಂಡು ಕವಿ ಬರೆದ ಸಾಲುಗಳಿವು. ನಾವು ವಾಯು ವಿಹಾರಕ್ಕೆ ಹೋಗುವಾಗ ನಾವೂ ದೇವರ ರುಜುವನ್ನು ಕಂಡು ಪರವಶರಾಗುತ್ತೇವೆ.
ಈ ಬಾರಿ ಮಳೆ ಕಡಿಮೆ. ಕೆರೆಯನ್ನು ಸರಿಯಾಗಿ ಇಟ್ಟುಕೊಳ್ಳದಿರುವುದರಿಂದ ನೀರು ಸಂಗ್ರಹ ಪ್ರಮಾಣ ಕ್ಷೀಣಿಸಿ ಬರಡಾಗುತ್ತಿದೆ. ಕೆರೆ ಶುಚಿತ್ವಕ್ಕೆ ಸಂಬಂಧಿಸಿ ಯಾರೊಬ್ಬರೂ ಮನಸ್ಸು ಮಾಡುತ್ತಿಲ್ಲ. ಇಲ್ಲಿಗೆ ಡಿಸೆಂಬರ್ ಆರಂಭದಲ್ಲಿ ಹಲವು ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಆದರೆ, ಕೆರೆಯೇ ದುಸ್ಥಿತಿಯಲ್ಲಿರುವಾಗ ಅವುಗಳಿಗೆ ಆಹಾರ ಎಲ್ಲಿಂದ ಸಿಗಬೇಕು. ಸುಂದರ ಹಕ್ಕಿಗಳಿಗೆ ನಮ್ಮೂರಿನಲ್ಲಿ ಕೆಟ್ಟ ಕೆರೆಯನ್ನು ಇಟ್ಟುಕೊಂಡಿದ್ದೇವೆ ಎಂಬ ಬೇಸರ ಮೂಡಿದೆ ಎಂದು ವಾಯು ವಿಹಾರಕ್ಕೆ ಹೋಗುವ ವಕೀಲ ಡಿ.ಸತ್ಯನಾರಾಯಣ್ ತಿಳಿಸಿದರು.