ಗುಬ್ಬಿ: ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಬೆಳ್ಳಿಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಶನಿವಾರ ತಡರಾತ್ರಿ ಜರುಗಿದ ಬೆಳ್ಳಿ ಪಲ್ಲಕ್ಕಿ ಉತ್ಸವದಲ್ಲಿ ವೀರಗಾಸೆ ಕುಣಿತ, ಲಿಂಗಬೀರರ ನೃತ್ಯ, ನಂದಿ ಧ್ವಜ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಾವಿರಾರು ಭಕ್ತರನ್ನು ಆಕರ್ಷಿಸಿದ ಪಲ್ಲಕ್ಕಿ ಉತ್ಸವ ಜಾತ್ರೆಯ ವಿಶೇಷದಲ್ಲಿ ಒಂದಾಗಿದೆ. ಪಲ್ಲಕ್ಕಿಯಲ್ಲಿ ರಾರಾಜಿಸುವ ಚನ್ನಬಸವೇಶ್ವರ ಸ್ವಾಮಿಗೆ ಮಾಡಿದ ಹೂವಿನ ಅಲಂಕಾರ ಬಹುಮುಖ್ಯವಾಗಿತ್ತು. ಬಾಣ ಬಿರಸು ಪಟಾಕಿ ಸಿಡಿಮದ್ದು ಜನರನ್ನು ಆಕರ್ಷಿಸಿತು. ದೇವಾಲಯದ ಗರ್ಭಗುಡಿಯಲ್ಲಿನ ಮೂಲವಿಗ್ರಹಕ್ಕೆ ಹಣ್ಣಿನ ಅಲಂಕಾರ ಭಕ್ತರಲ್ಲಿ ಆನಂದ ತುಂಬಿತ್ತು.
ಪಲ್ಲಕ್ಕಿ ಉತ್ಸವಕ್ಕೆ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು. ದೇವಾಲಯದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್, ಪೇಶಗಾರ್ ಮಂಜುನಾಥ್ ಮತ್ತಿತರು ಈ ಸಂದರ್ಭದಲ್ಲಿ ಇದ್ದರು.