ಮಂಡ್ಯ: ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಕೇವಲ ರೋಗಗಳಿಗೆ ಮಾತ್ರವಲ್ಲ, ಸಮಾಜದ ಸಮಸ್ಯೆಗಳಿಗೂ ಚಿಕಿತ್ಸಕರಾಗಿದ್ದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಯನ್ನು ವಿತರಿಸಿ ಹಾಗೂ ಶಿವಳ್ಳಿ ಕೆಂಪೇಗೌಡ ಅವರ `ಗೀಜಗನಗೂಡು~ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಮಣ್ಣ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಶ್ರಮಿಸಿದರು. ವಿಶ್ವವಿದ್ಯಾಲಯದಲ್ಲಿ ನಾನು ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟರು. ಮರೆಯಲಾಗದಂತಹ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು. `ಮಂಡ್ಯಕ್ಕೂ, ನನಗೂ ಆತ್ಮೀಯ ಸಂಬಂಧವಿದೆ. ಮೊದಲ ಪ್ರಶಸ್ತಿಯನ್ನು ನಾನು ಇಲ್ಲಿಯೇ ಪಡೆದಿದ್ದೆ~ ಎಂದರು.
ಲೇಖಕ ಡಾ.ರಹಮತ್ ತರೀಕೆರೆ ಮಾತನಾಡಿ, ಅಧಿಕಾರಸ್ಥರು ಹಣವನ್ನು ಗುಡ್ಡೆ ಹಾಕುತ್ತಿದ್ದಾರೆ.
ಆರೋಗ್ಯ, ಶಿಕ್ಷಣ ದುಬಾರಿಯಾಗಿದೆ. ಜನರು ಸಂಕಷ್ಟ ಸಿಲುಕಿದ್ದಾರೆ. ಸಮಾಜದಲ್ಲಿನ ಇಂತಹ ದೋಷಗಳನ್ನು ಎತ್ತಿ ತೋರಿಸಿದ ರಾಮಣ್ಣ ಅವರ ಜನಪರವಾಗಿದ್ದರು ಎಂದರು. ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಯನ್ನು ಮಂಜುನಾಥ ಲತಾ ಅವರಿಗೆ ಪ್ರದಾನ ಮಾಡಲಾಯಿತು. ಲೇಖಕರಾದ ಡಾ.ಕೆ.ವೈ. ನಾರಾಯಣಸ್ವಾಮಿ, ಕೇಶವ ಮಳಗಿ, ಡಿ.ಪಿ.ರಾಜಮ್ಮ ರಾಮಣ್ಣ, ಕಮಲಮ್ಮ ಶಿವಳ್ಳಿ ಕೆಂಪೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಉಪಸ್ಥಿತರಿದ್ದರು.