ಏಷ್ಯಾಖಂಡದಲ್ಲಿ ಎರಡನೇ ಅತಿ ದೊಡ್ಡ ಕೆರೆ, ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಹಾಗೂ ದಾವಣಗೆರೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಇನ್ನೊಂದು ಆಕರ್ಷಣೆ ಭದ್ರಾ ಎಡದಂಡೆ ನಾಲೆಯ ಅಕ್ವಾಡೆಕ್ಟ್.
ದಶಕಗಳ ಹಿಂದೆಯೇ ನೀರಾವರಿ ಉದ್ದೇಶಕ್ಕೆ ಎರಡು ಗುಡ್ಡಗಳ ನಡುವೆ ಕಾಲುವೆ ಸಂಪರ್ಕಕ್ಕಾಗಿ ಕಾಂಕ್ರಿಟ್ ಅಕ್ವಾಡೆಕ್ಟ್ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಅದರ ಮೇಲೆ ಓಡಾಡಲು ಕಾಂಕ್ರೀಟ್ ರಸ್ತೆಯಿದ್ದು, (ಫುಟ್ಪಾತ್ ಮಾದರಿಯಲ್ಲಿ) ಕೆಳಗೆ ಸುಮಾರು 10 ರಿಂದ 12 ಅಡಿ ಆಳದ ನೀರು ರಭಸದಿಂದ ಹರಿಯುತ್ತಿರುತ್ತದೆ. ಆದರೆ, ಎರಡೂ ಬದಿಯಲ್ಲಿ ರಕ್ಷಣಾ ಗೋಡೆ ಇಲ್ಲದೇ ಬೋಳುಬೋಳಾಗಿದೆ. ಒಂದು ಕಡೆ ಆಳವಾದ ತಗ್ಗು ಪ್ರದೇಶ ಇನೊಂದೆಡೆ ರಭಸದ ನೀರು. ಆಯ ತಪ್ಪಿದರೆ ಮಾರಣಾಂತಿಕ ಅಪಾಯ ಕಟ್ಟಿಟ್ಟ ಬುತ್ತಿ.
ರಜಾ ದಿನಗಳಲ್ಲಿ, ಜಾತ್ರೆ ಸಮಯದಲ್ಲಿ ಮಕ್ಕಳೊಂದಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈಚಿನ ದಿನಗಳಲ್ಲಿ ಭೇಟಿ ನೀಡುತ್ತಿದ್ದಾರೆ. ಅಪಾಯದ ಅರಿವಿಲ್ಲದ, ಕುತೂಹಲ ತುಂಬಿದ ಮಕ್ಕಳು ಪೋಷಕರ ಗಮನಕ್ಕೆ ಬಾರದಂತೆ ಆಟವಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ದುರಂತ ಸಂಭವಿಸಿದ ಮೇಲೆ ಕಾರ್ಯೋನ್ಮುಖವಾಗುವ ಬದಲು ಮುಂಜಾಗ್ರತೆಯಾಗಿ ಸಂಬಂಧಪಟ್ಟ ಇಲಾಖೆ ಸೂಕ್ತಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ.
ಆರಂಭದ ದಿನಗಳಲ್ಲಿ ಅಕ್ವಾಡೆಕ್ಟ್ನ ಎರಡೂ ಬದಿಯಲ್ಲಿ ಕಬ್ಬಿಣದ ಸಲಾಕೆಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ಕಬ್ಬಿಣಕ್ಕೆ ಬೆಲೆ ಬಂದ ನಂತರ ಕಳ್ಳರು ರಾತ್ರೋರಾತ್ರಿ ಅವುಗಳನ್ನು ಕೊಯ್ದು ಮಾರಾಟ ಮಾಡಿದ್ದಾರೆ. ಹೀಗಾಗಿ, ಹಲವು ವರ್ಷಗಳೇ ಕಳೆದರೂ ರಕ್ಷಣೆಗೆ ಸೂಕ್ತಕ್ರಮ ಕೈಗೊಂಡಿಲ್ಲದಿರುವುದು ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆ. ಶೀಘ್ರವಾಗಿ ಪ್ರವಾಸಿಗರ ಸುರಕ್ಷತೆಗೆ ರಕ್ಷಣಾ ಗೋಡೆ ನಿರ್ಮಿಸಿದಲ್ಲಿ ಈ ತಾಣ ಮತ್ತಷ್ಟು ಆಕರ್ಷವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸೂಳೆಕರೆ ನಾಗರಿಕರ ಆಶಯ.