ಗುಂಡ್ಲುಪೇಟೆ: ಕುಡಿಯುವ ನೀರಿನ ಸಮಸ್ಯೆ, ಶುಚಿತ್ವದ ಕೊರತೆ, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಉರಿಯದ ಬೀದಿ ದೀಪಗಳು, ರಸ್ತೆಅಗೆದು ಸ್ವತಃ ತಾವೇ ಚರಂಡಿ ತೋಡಿ ಕೊಂಡಿರುವುದು, ಡಾಂಬರು ಕಾಣದ ರಸ್ತೆ ಇವು ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಬಳಿ ಕೇಂದ್ರವಾದ ಬೇಗೂರಿನ ದುಃಸ್ಥಿತಿ.
ಈ ಗ್ರಾಮದಲ್ಲಿ ಅನೇಕ ತೊಂಬೆಗಳಿದ್ದರೂ ಸರಿಯಾಗಿ ನೀರು ಪೂರೈಸದಿರುವುದರಿಂದ ಕಾರಣ ಸರದಿಯಲ್ಲಿ ನೀರು ಹಿಡಿಯುವ ಸ್ಥಿತಿ ಇದೆ.
ರಸ್ತೆಗಳ ಸಮರ್ಪಕ ನಿರ್ವಹಣೆ ಇಲ್ಲದೇ ಹಲವು ಬಡಾವಣೆಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಚರಂಡಿಗಳಲ್ಲಿ ಹೂಳು ತುಂಬಿದ್ದು, ಕೊಚ್ಚೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಕಬಿನಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸದ ಕಾರಣ ನೀರಿನ ಸಮಸ್ಯೆ ತಲೆದೋರಿದೆ.
ಪ್ರಸ್ತುತ ರೂ. 8 ಲಕ್ಷ ವೆಚ್ಚದಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಹಾಗೂ ಸಂಪ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಇದಾದ ನಂತರ ಕಬಿನಿ ಕುಡಿಯುವ ನೀರಿನ ಸಂಪರ್ಕ ಪಡೆಯಲಾಗುವುದು ಎಂದು ಬೇಗೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಸಿ. ನಾಗೇಂದ್ರ ಹೇಳುತ್ತಾರೆ.
ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲು ಇಲ್ಲಿನ ಗ್ರಾಮ ಪಂಚಾಯಿತಿ ವಿಫಲವಾಗಿದೆ ಗ್ರಾಮದಲ್ಲಿ ಶುಚಿತ್ವ ಕೇಳುವಂತಿಲ್ಲ, ತಿಂಗಳುಗಳಾದರೂ ಕಸ ವಿಲೇವಾರಿಾಗುವುದಿಲ್ಲ ಗ್ರಾಮಸ್ಥರ ಆರೋಪ. ಗ್ರಾಮದ ಒಳಭಾಗದಲ್ಲಿ ಒಂದೇ ಒಂದು ಡಾಂಬರು ರಸ್ತೆ ಇಲ್ಲ. ಬಯಲು ಶೌಚಾಲಯದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.
ಗ್ರಾಮದ ಹೊಸ ಬಡಾವಣೆಯಲ್ಲಿ ರಸ್ತೆ ನಿರ್ಮಿಸದ ಕಾರಣ ಮಳೆ ನೀರು ತುಂಬಿಕೊಂಡು ಜನರಿಗೆ ಓಡಾಡಲು ತುಂಬಾ ತೊಂದರೆಯಾಗಿದೆ. ಸೋಮವಾರ ಬಿದ್ದ ಮಳೆಯಿಂದ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕೂಡಲೇ ಈ ಬಡಾವಣೆಯಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಬಡಾವಣೆ ನಿವಾಸಿಗಳಾದ ಸುರೇಶ್ ಹಾಗೂ ಲೋಕೇಶ್ ಅಳಲು ತೋಡೊಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮದ ಸಮಸ್ಯೆಗಳತ್ತ ಗಮನಹರಿಸುವರೇ ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.