ಹುಕ್ಕೇರಿ: ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಸುಲ್ತಾನಪುರ ಬಳಿ ನಿರ್ಮಿಸಿರುವ ಬ್ಯಾರೇಜ್ ಎತ್ತರಕ್ಕಾಗಿ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಿ, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಯರನಾಳ, ಬಡಕುಂದ್ರಿ, ಕೋಚರಿ ಬ್ಯಾರೇಜ್ ಗಳ ತಳಪಾಯ ದುರಸ್ತಿಗಾಗಿ 3 ಪಂಪ್ ಹೌಸಗಳಲ್ಲಿರುವ ಯಂತ್ರಗಳ ನವೀಕರಣಕ್ಕಾಗಿ ಹಣ ಬಿಡುಗಡೆ ಮಾಡ ಬೇಕು. ಕುರಣಿ, ಹಂಚಿನಾಳ, ಉತ್ತರ ಖಾನಾಪುರ ಗ್ರಾಮಗಳಿಗೆ ಹೋಗುವ ಹರಿ ಕಾಲುವೆ ಮುಖಾಂತರ ನೀರು ಹರಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಪೂರೈಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಶ್ರೀ ಹಿರಣ್ಯಕೇಶಿ ರೈತ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪಾಲ್ಗೊಂಡಿದ್ದ ರೈತರು ಅಡವಿ ಸಿದ್ದೇಶ್ವರ ಮಠದಿಂದ ಕೋರ್ಟ್ ವೃತ್ತದವರೆಗೆ ಮೆರವಣಿಗೆ ಮಾಡಿ, ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಹಿತರಕ್ಷಣಾ ಸಮಿತಿ ಸಂಚಾಲಕ ರಾಮಚಂದ್ರ ಜೋಶಿ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕಾಲುವೆಗಳಿಗೆ ನೀರು ಬಿಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ರೈತ ಧುರಿಣ ಕಲ್ಯಾಣರಾವ್ ಮುಚಳಂಬಿ, ಮಸರಗುಪ್ಪಿಯ ಬಿ.ಬಿ. ಕಂಠಿ, ಜಿ.ಪಂ ಮಾಜಿ ಸದಸ್ಯ ಪಾರೇಶಗೌಡ ಪಾಟೀಲ, ಮಹಾರುದ್ರ ಜರಳಿ, ಶಂಕರ ಘೋರ್ಪಡೆ, ಅಡಿವೆಪ್ಪ ಢಂಗೆ ಸಂಜಯ ದೇಸಾಯಿ, ಸುರೇಶ ದೇಸಾಯಿ, ಈರಣ್ಣಾ ಕಡಲಗಿ, ಎಂ.ಎಸ್.ಹಿರೇಮಠ, ಸುನೀಲ ಢಂಗೆ,ಹನುಮಂತ ಇನಾಮದಾರ, ಆನಂದ ತವಗಮಠ, ಸಂದೀಪ ಮೋಕಾಶಿ, ಹೆಬ್ಬಾಳದ ಜಿನಗೌಡ ಪಾಟೀಲ ಮತ್ತಿತರರು ಮಾತನಾಡಿ ವ್ಯಾಪ್ತಿಯ 23 ಹಳ್ಳಿಗಳಿಗೆ ನೀರು ಡಿಶೆಂಬರ್ ಕೊನೆ ವಾರದೊಳಗೆ ನೀರು ಹರಿಸದಿದ್ದರೆ ನೀರಾವರಿ ಇಲಾಖೆ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ತಹಶೀಲ್ದಾರ್ ಸೈಯದ್ ಅಫ್ರಿನ್ ಬಾನು ಬಳ್ಳಾರಿ ಅವರಿಗೆ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಸೈಯದ್ ಅಫ್ರಿನ್ ಬಾನು ಬಳ್ಳಾರಿ, ನೀರಾವರಿ ಅಧಿಕಾರಿಗಳು ಹಾಗೂ ರೈತರು ಸಹಕಾರಿಂದ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಕಾಲುವೆಗಳಿಂದ ಯಂತ್ರದ ಮೂಲಕ ನೀರೆತ್ತುವುದು, ಕಾಲುವೆಗಳನ್ನು ಒಡೆಯುವಂತ ಪ್ರಕರಣ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನೀರಾವರಿ ಇಲಾಖೆಯ ಅಧೀಕ್ಷಕ ಎಂಜನಿಯರ್ ಬಿ.ವೈ,ಪವಾರ, ಎಇಇ ಬಿ.ಡಿ.ನಸಲಾಪುರೆ ಮಾತನಾಡಿ ಸಂಗಮ ಬ್ಯಾರೇಜದ ಬಗ್ಗೆ ಸರ್ಕಾರಕ್ಕೆ ಯೋಜನೆಯ ಪ್ರಸ್ತಾವಣೆ ಕಳುಹಿಸಲಾಗಿದೆ. ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತೆರಳಿದರು.
ಎಲಿಮುನ್ನೋಳಿಯ ಭೀಮಗೌಡ ಗಿರಿಗೌಡನವರ,ಯರಗಟ್ಟಿಯ ಭೀಮಗೌಡ ಪಾಟೀಲ, ಶಿವಶಂಕರ ಢಂಗ, ಮಯೂರ ಘಸ್ತಿ, ಅರ್ಜುನವಾಡ, ಕೋಚರಿ, ಯರನಾಳ, ಹೆಬ್ಬಾಳ, ಉ.ಖಾನಾಪುರ ಬಸ್ತವಾಡ, ಚಿಕ್ಕಾಲಗುಡ್ಡ ಕುರಣಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಡಿ.ವೈ.ಎಸ್.ಪಿ ಶೇಖರ ಅಗಡಿ, ಸಿಪಿಐ ಎಸ್.ಸಿ. ಪಾಟೀಲ, ಪಿಎಸ್ಐ ಹೆಚ್.ಡಿ. ಮುಲ್ಲಾ, ಮಲ್ಲಿಕಾರ್ಜುನ ಬಿರಾದಾರ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.