ರಾಯಚೂರು: ಇಲ್ಲಿನ ಹೈದರಾಬಾದ್ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಮುಖ್ಯ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್ಎನ್ಎಲ್ ಅಧಿಕಾರಿಗಳ ಹಾಗೂ ಅಧಿಕಾರೇತರ ಉದ್ಯೋಗಿಗಳ ಸಂಯುಕ್ತ ವೇದಿಕೆಯ ನೇತೃತ್ವದಲ್ಲಿ ಸೋಮವಾರ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದು ದಿನ ಸಾಂಕೇತಿಕ ಧರಣಿ ನಡೆಸಿದರು.
ಬಿಎಸ್ಎನ್ಎಲ್ನಲ್ಲಿ ಪರಭಾರೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಐಬಿ ಅಧಿಕಾರಿಗಳನ್ನು ಕೂಡಲೇ ವಾಪಸ್ ಕಳಿಸಬೇಕು ಅಥವಾ ಬಿಎಸ್ಎನ್ಎಲ್ನಲ್ಲಿ ಸೇರ್ಪಡೆಯಾದ ಹಾಗೂ ನಿಯುಕ್ತಿಯಾದ ಎಲ್ಲ ಅಧಿಕಾರಿಗಳ ಹಾಗೂ ಇತರ ಉದ್ಯೋಗಿಗಳನ್ನು ವಾಪಸ್ ಡಿಓಟಿ ವಿಭಾಗಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವುದಾಗಿ ಹೇಳಿದರು. ಉಭಯ ಸಂಘಟನೆಗಳ ಮುಖಂಡರಾದ ಬಸವರಾಜ, ಪ್ರಭು ದೊರೈ, ಈ ಶಿವರಾಜ್, ಬಸವರಾಜ ತೊಟ್ಟ, ಮುನಿಯಪ್ಪ, ಕರಿಯಪ್ಪ, ಡಿ ಸಿದ್ದಪ್ಪ, ರಾಮಚಂದ್ರ ಬಿ ಹಾಗೂ ಇತರರು ಪಾಲ್ಗೊಂಡಿದ್ದರು.