ಮಡಿಕೇರಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಜಿಲ್ಲೆಯಲ್ಲಿನ ವಿವಿಧ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಕೂರ್ಗ್ ಡಿಸ್ಟ್ರಿಕ್ಟ್ ಜನರಲ್ ವರ್ಕರ್ಸ್ ಯೂನಿಯನ್, ಕಟ್ಟಡ ಕಾರ್ಮಿಕರ ಸಂಘ, ಹಮಾಲಿ ಸಂಘಟನೆ, ಪಂಚಾಯತ್ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿಸಲು ಮತ್ತು ರಕ್ಷಣೆ ಮಾಡಲು ವಿಶೇಷ ಪ್ಯಾಕೇಜ್, ಕಾರ್ಮಿಕರ ಕಾನೂನನ್ನು ಜಾರಿಗೊಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಸಾರ್ವತ್ರಿಕ ಸಾಮಾಜಿಕ, ಭದ್ರತೆ ಹಾಗೂ ರಾಷ್ಟ್ರೀಯ ಭದ್ರತಾ ನಿಧಿ, ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳ ಹಿಂಪಡೆಯುವುದನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಕಾರ್ಮಿಕರಿಗೂ ಪ್ರತಿ ತಿಂಗಳಿಗೆ ರೂ.10 ಸಾವಿರ ಕನಿಷ್ಠ ಕೂಲಿಯನ್ನು ನೀಡುವಂತೆ ಕನಿಷ್ಠ ಕೂಲಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಸಾರ್ವತ್ರಿಕಗೊಳಿಸಬೇಕು.ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕು. 45 ದಿನಗಳ ಒಳಗಾಗಿ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿಯಾಗಬೇಕು.
ಭವಿಷ್ಯ ನಿಧಿ ಸೇರಿದಂತೆ ಮತ್ತಿತರ ಸೌಲಭ್ಯ ಪಡೆಯಲು ಇರುವ ನಿರ್ಬಂಧಗಳನ್ನು ತೆಗೆದು ಹಾಕಿ ಗ್ರಾಜ್ಯುಟಿ ಮೊತ್ತವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.ಪಂಚಾಯತ್ ಸಂಘಟನೆಯ ಕಾರ್ಯದರ್ಶಿ ಭರತ್, ಕೂರ್ಗ್ ಡಿಸ್ಟ್ರಿಕ್ಟ್ ಜನರಲ್ ವರ್ಕರ್ಸ್ ಯೂನಿಯನ್ ಜಂಟಿ ಕಾರ್ಯದರ್ಶಿ ರಮೇಶ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎ,ಸಿ. ಸಾಬು, ಹಮಾಲಿ ಸಂಘಟನೆ ಅಧ್ಯಕ್ಷ ಎಚ್.ಎನ್. ರವಿ ಇದ್ದರು.