ಕೂಡ್ಲಿಗಿ: ವಿವಿಧ ಬೇಡಿಕೆಗಳನ್ನು ಈಡೇರೆಸುವಂತೆ ಒತ್ತಾಯಿಸಿ ಶುಕ್ರವಾರ ತಹಶೀಲ್ದಾರ್ರ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಪ್ರತಿಭಟಿಸಿ ತಹಶೀಲ್ದಾರ್ರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ರೈತರ ಬಗ್ಗೆ ಕಾಳಜಿ ತೋರದೆ ಅವೈಜ್ಞಾನಿಕ ಕಾನೂನನ್ನು ತಂದು ಪದೇ ಪದೇ ರೈತರನ್ನು ಒಕ್ಕಲೆಬ್ಬಿಸಲಾಗುತ್ತದೆ. ರೈತರಿಗೆ ತೊಂದರೆ ಕೊಡದಂತೆ ರೈತ ಸಂಘ ಅನೇಕ ಬಾರಿ ಮನವಿ ಮಾಡಿದ್ದರು ಪ್ರಯೋಜವಾಗಿಲ್ಲ ಎಂದು ರೈತರು ದೂರಿದರು.
ತಾಲ್ಲೂಕು ತೀರ ಹಿಂದುಳಿದ ಪ್ರದೇಶವಾಗಿದ್ದು, ಪ್ರತಿ ಸಾರಿಯೂ ಬರಗಾಲಕ್ಕೆ ತುತ್ತಾಗುತ್ತದೆ, ಅದರಿಂದ ಡಾ.ಪರಮಶಿವಯ್ಯ ವರದಿಯಂತೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೆ ತರಬೇಕು, 30-40 ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಅನಾಧೀನವಾಗಿ ಉಳುಮೆ ಮಾಡುತ್ತಿರುವ ರೈತರಿಗೆ ನೋಟಿಸ್ ಜಾರಿ ಮಾಡಿರುವುದನ್ನು ತಡೆದು, ತಕ್ಷಣ ಅವರಿಗೆ ಪಟ್ಟಾ ನೀಡುವಂತೆ ಮನವಿ ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಸರಿಯಾದ ಪಡಿತರ ಚೀಟಿ ವಿತರಣೆಯಾಗದೆ ಅನೇಕ ಕಡುಬಡವ ಕುಟಂಬಗಳು ಪಡಿತರ ಸೌಲಭ್ಯದಿಂದ ವಂಚಿತವಾಗಿವೆ. ಅಂತಹ ಕುಟಂಬಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಪಡಿತರ ಚೀಟಿ ನೀಡಬೇಕು, ರೈತರ ಪಂಪ್ ಸೆಟ್ಗಳಿಗೆ ನಿರಂತರ 8 ತಾಸು ತ್ರಿಫೇಸ್, ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಒದಗಿಸಬೇಕು. ಇವೆಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸದೇ ಹೋದರೆ, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಕೈಗೊಳ್ಳಲಾಗುವುದು ರೈತರು ಎಂದು ಎಚ್ಚರಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕಕ್ಕುಪ್ಪಿ ಎಂ. ಬಸವರಾಜ, ಕೆ.ಎಂ. ಚಂದ್ರಯ್ಯ, ಎಂ.ತಿಪ್ಪಣ್ಣ, ಆರ್.ನಾಗರೆಡ್ಡಿ, ವಿ.ನಾಗರಾಜ, ಎನ್.ಭರಮಣ್ಣ, ಕೆ.ಕೆ. ಹಟ್ಟಿ ಮಹೇಶ್, ಎಸ್. ಬಾಷಾಸಾಬ್, ಎಂ.ಕೊಟ್ರೇಶ್, ನೀಲಪ್ಪ, ರಾಜನ ಗೌಡ, ರಮೇಶ್ ನಾಯ್ಕ್, ಬಿ.ಗೋಣಿಬಸಪ್ಪ, ಸೂರ್ಯನಾರಾಯಣ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.