ಮುಂಡಗೋಡ: ಅರಣ್ಯ ಅತಿಕ್ರಮಣ ದಾರರಿಗೆ ಪರಿಹಾರ ದೊರಕಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಹಸಿರು ಸೇನೆಯ ಸದಸ್ಯರು ತಹಶೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಳೆದ 35–40ವರ್ಷಗಳಿಂದ ಅತಿಕ್ರಮಣ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಇದುವರೆಗೂ ಪಟ್ಟಾ ನೀಡುವ ಕೆಲಸ ಸರ್ಕಾರದಿಂದ ನಡೆದಿಲ್ಲ. ಕೂಡಲೇ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಅತಿಕ್ರಮಣ ರೈತರಿಗೆ ಪಟ್ಟಾ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಳೆದ 4ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತ ತೀವ್ರ ತೊಂದರೆ ಅನುಭವಿಸಿದರೂ ಬೆಳೆ ವಿಮೆ ನೀಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗಿದೆ. ಅರ್ಹ ಬಡ ರೈತರಿಗೆ ಹಾಗೂ ಕೂಲಿಕಾರರಿಗೆ ಬಿ.ಪಿ.ಎಲ್ ಪಡಿತರ ಚೀಟಿಯನ್ನು ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತ ಸಂಘದ ಅಧ್ಯಕ್ಷ ಶಂಭಣ್ಣ ಕೋಳೂರ, ಲೋಹಿತ್ ಮಟ್ಟಿಮನಿ, ಇಬ್ರಾಹಿಂಸಾಬ ಪಠಾಣ, ವಿಶ್ವನಾಥ ಹಿರೇಮಠ, ಲಕ್ಷ್ಮಣ ಬನ್ಸೋಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.