ಗದಗ: ರೈತರ ಬೆಳೆ ಹಾಗೂ ಟ್ರ್ಯಾಕ್ಟರ್ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು, ಕಿತ್ತೂರ ಚೆನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.ಮೂರು ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಇದ್ದರಿಂದ ರೈತರ ಬೆಳೆ ಹಾಗೂ ಟ್ರಾಕ್ಟರ್ ಸಾಲ ಮನ್ನಾ ಮಾಡಬೇಕು, ರೈತರ ಬೆಳೆ ಹಾನಿ ಪರಿಹಾರ ನೀಡಬೇಕು, ದನ-ಕರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು, ಬೆಳೆ ವಿಮಾ ಪರಿಹಾರ ನೀಡಬೇಕು ಹಾಗೂ ರೈತರ ಹೊಲಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಲದೇ ಪಂಪಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಬಡ್ಡಿ ರಹಿತ ಬೆಳೆ ಸಾಲ ಸಣ್ಣ ಮತ್ತು ದೊಡ್ಡ ರೈತರಿಗೂ ದೊರಕುವಂತೆ ಮಾಡಬೇಕು, ಕೃಷಿ ಮಾರುಕಟ್ಟೆ ಇಲಾಖೆಯಿಂದ ಎಲ್ಲ ಹಳ್ಳಿಗಳಿಗೂ ಉಗ್ರಾಣ ನಿರ್ಮಿಸಿ ಕೊಡಬೇಕು, ಸುಮಾರು 60 ವರ್ಷ ಮೇಲ್ಪಟ್ಟ ಎಲ್ಲ ರೈತರಿಗೂ ಮಾಸಿಕ ವರಮಾನ ರೂ. 2 ಸಾವಿರ ಕೊಡಬೇಕು ಹಾಗೂ ಹಿಂದೆ ನೀಡುತ್ತಿದ್ದ ಟ್ರಾಕ್ಟರ್ ಸಬ್ಸಿಡಿಯನ್ನು ರೈತರಿಗೆ ಅನುಕೂಲ ವಾಗುವಂತೆ ಮುಂದುವರೆಸಿ ಕೊಂಡು ಹೋಗಬೇಕು ಎಂದು ಒತ್ತಾಯಿಸಿ ದರು. ಬಳಿಕ ಜಿಲ್ಲಾಧಿಕಾರಿ ಪಾಂಡು ರಂಗ ನಾಯಕ ಅವರಿಗೆ ಬೇಡಿಕೆ ಈಡೇರಿಸುವ ಮನವಿ ಸಲ್ಲಿಸಿದರು.