ಇಂಡಿ: ಜಿಲ್ಲೆಯ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಹೋರಾಟದ ಮನೋಪ್ರವೃತ್ತಿ ಇಲ್ಲದಿರುವುದೇ ಕಾರಣ ಎಂದು ಶಾಸಕ ಡಾ. ಸಾರ್ವಭೌಮ ಬಗಲಿ ಮಂಗಳವಾರ ಇಲ್ಲಿ ಅಭಿಪ್ರಾಯಪಟ್ಟರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲು ತಾಲ್ಲೂಕಿನ ಪ್ರಗತಿಪರ ರೈತರು ಶಾಂತೇಶ್ವರ ಕಾಲೇಜಿನಿಂದ ಮೆರವಣಿಗೆ ಹೊರಟು ತಹಶೀಲ್ದಾರ್ ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು.
`ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಕಪ್ಪು ಪಟ್ಟಿಯನ್ನು ತೆರವುಗೊಳಿಸಬೇಕು.ಕಬ್ಬಿನ ಬಾಕಿ ಪರಿಹಾರವನ್ನು ಕೂಡಲೇ ನೀಡಬೇಕು ಎಂಬ ಬೇಡಿಕೆಗಳು ನ್ಯಾಯುತವಾಗಿವೆ. ಇವುಗಳ ಈಡೇರಿಕೆಗೆ ನಾನು ಯಾವ ತ್ಯಾಗಕ್ಕೂ ಸಿದ್ದನಾಗಿದ್ದೇನೆ~ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಸಂಜೀವ ಭೈರಶೆಟ್ಟಿ, ಅಶೋಕಗೌಡ ಬಿರಾದಾರ ಮುಂತಾದ ರೈತ ಮುಖಂಡರು ಮಾತನಾಡಿ, ಕಳೆದ ಆರು ತಿಂಗಳಿಂದ ವಿದ್ಯುತ್ ಇಲ್ಲದೇ ಬೆಳೆಗಳು ಒಣಗುತ್ತಿವೆ. ಬಿಜೆಪಿ ಸರ್ಕಾರ 2005-06ನೇ ಸಾಲಿನಲ್ಲಿ ಇಂಡಿ ತಾಲ್ಲೂಕಿನ ರೈತರಿಗೆ ನೀಡಬೇಕಿದ್ದ ಕಬ್ಬಿನ ಪರಿಹಾರದ ಬಾಕಿಯನ್ನು ಇನ್ನೂ ನೀಡಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದೇವೆ. ಶಾಸಕರೂ ಒತ್ತಾಯಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ ಸರ್ಕಾರ ಆ ಕೆಲಸವನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ದೇವೇಂದ್ರ ಕುಂಬಾರ, ಶ್ರೆಮಂತ ಬಾರೀಕಾಯಿ, ಅಪ್ಪಾರಾಯ ಪಾಟೀಲ, ಬಸವರಾಜ ಕಾಲೇಬಾಗ, ಎಸ್.ಟಿ.ಪಾಟೀಲ, ಸಿದ್ದಣ್ಣ ಶಿವೂರ, ಪ್ರದೀಪ ಮೂರಮನ, ಫಾರೂಕ್ ಶಾಮನ್ನವರ, ಶಿವು ಕುಂಬಾರ, ಸಂಗಣ್ಣಗೌಡ ರೋಡಗಿ ಉಪಸ್ಥಿತರಿದ್ದರು.